ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಹಸಿದವನಿಗೇ ಅನ್ನ

Last Updated 4 ಮಾರ್ಚ್ 2021, 1:18 IST
ಅಕ್ಷರ ಗಾತ್ರ

ದರಿದ್ರಾನ್‌ ಭರ ಕೌಂತೇಯ ನ ಸಮೃದ್ಧಾನ್‌ ಕದಾಚನ ।
ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ ।।

ಇದರ ತಾತ್ಪರ್ಯ ಹೀಗೆ:

‘ಯಾವಾಗಲೂ ಬಡವರಿಗೆ ಆಧಾರವಾಗಿರಬೇಕೇ ವಿನಾ ಶ್ರೀಮಂತರಿಗಲ್ಲ; ರೋಗಿಗೆ ಔಷಧ ಬೇಕೆ ಹೊರತು ಆರೋಗ್ಯವಂತನಿಗೆ ಔಷಧದಿಂದ ಆಗಬೇಕಾಗುದೇನು?’

ಯಾರಿಗೆ ಸಹಾಯದ ಆವಶ್ಯಕತೆ ಇದೆಯೋ ಅವರಿಗೆ ಮಾಡಬೇಕಾಗಿದೆಯೆ ಹೊರತು ಬಲವಂತರಿಗೆ ಅಲ್ಲ ಎಂಬುದನ್ನು ಮಹಾಭಾರತದ ಈ ಶ್ಲೋಕ ಹೇಳುತ್ತಿದೆ.

ಸಹಾಯ ಎಂಬುದು ಅಬಲರಿಗೆ ಸಿಗಬೇಕಾಗಿರುವ ನೆರವು. ಇದು ಹಣ, ವಿದ್ಯೆ, ಅನ್ನ – ಎಲ್ಲ ರೀತಿಯ ಸಹಾಯಗಳಿಗೂ ಅನ್ವಯಿಸುತ್ತದೆ. ಹಣದ ಆವಶ್ಯಕತೆ ಬಡವನಿಗೆ ಇರುತ್ತೆಯೆ ವಿನಾ ಶ್ರೀಮಂತನಿಗೆ ಅಲ್ಲ; ಅಕ್ಷರಗಳ ಪರಿಚಯವನ್ನು ಮಾಡಿಸಬೇಕಾದದ್ದು ಅವಿದ್ಯಾವಂತನಿಗೆ ವಿನಾ ವಿದ್ಯಾವಂತನಿಗೆ ಅಲ್ಲ; ಹಸಿದಿರುವವನಿಗೆ ಆಹಾರದ ಆವಶ್ಯಕತೆಯಿರುತ್ತದೆಯೇ ವಿನಾ ಹೊಟ್ಟೆ ತುಂಬಿರುವವನಿಗೆ ಅಲ್ಲ.

ಈ ಶ್ಲೋಕಕ್ಕೆ ಪೂರಕವಾಗಿ ಇನ್ನೊಂದು ಸುಭಾಷಿತವನ್ನೂ ನೋಡಬಹುದು:

ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್‌ ।

ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।

‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ’ – ಎಂಬುದು ಈ ಸುಭಾಷಿತದ ತಾತ್ಪರ್ಯ.

ಒಬ್ಬ ತಾಯಿಗೆ ನಾಲ್ವರು ಮಕ್ಕಳಿದ್ದಾರೆಂದುಕೊಳ್ಳಿ. ಅದರಲ್ಲಿ ಒಬ್ಬ ಮಗನೋ ಅಥವಾ ಮಗಳೋ ಸ್ವಲ್ಪ ದಡ್ಡನೋ ಅಥವಾ ದುರ್ಬಲನೋ ಆಗಿದ್ದಾನೆ ಎಂದಿಟ್ಟುಕೊಳ್ಳಿ. ಆ ತಾಯಿ ಎಲ್ಲ ಮಕ್ಕಳಿಗಿಂತಲೂ ಈ ಅಶಕ್ತ ಮಗುವಿಗೆ ಹೆಚ್ಚಿನ ಗಮನವನ್ನು ಕೊಡುತ್ತಾಳೆ. ಹೀಗೆಂದು ಅವಳು ಮಕ್ಕಳಲ್ಲಿ ತಾರತಮ್ಯ ಮಾಡುತ್ತಾಳೆ ಎಂದಲ್ಲ; ಯಾರಿಗೆ ಎಷ್ಟು ಪ್ರೀತಿ–ಕಾಳಜಿಗಳು ಅವಳಿಂದ ಬೇಕೋ ಅದಕ್ಕೆ ತಕ್ಕ ಪ್ರಮಾಣದಲ್ಲಿ ಅವಳು ಒದಗಿಸುತ್ತಾಳೆ. ಇದು ನಿಜವಾದ ಮಾತೃವಾತ್ಸಲ್ಯ.

ಆದರೆ ನಾವು ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆ ತುಂಬಿದವರಿಗೇ ಅನ್ನವನ್ನು ನೀಡುತ್ತಿರುತ್ತೇವೆ; ಹಸಿದವರ ಕಡೆಗೆ ನಮ್ಮ ಗಮನ ಹೋಗುವುದಿಲ್ಲ. ಸುಭಾಷಿತ ಇಂಥ ಮನೋಧರ್ಮವನ್ನೇ ಪ್ರಶ್ನಿಸುತ್ತಿರುವುದು. ಔಷಧ ಬೇಕಾಗಿರುವುದು ಅನಾರೋಗ್ಯದಲ್ಲಿರುವವನಿಗೆ; ಅದನ್ನು ಬಿಟ್ಟು ಆರೋಗ್ಯವಾಗಿರುವವನಿಗೆ ಔಷಧವನ್ನು ಕುಡಿಸಿದರೆ ಏನು ಪ್ರಯೋಜನ? ಅದರಿಂದ ಅವನಿಗೆ ಪ್ರಯೋಜನಕ್ಕಿಂತಲೂ ತೊಂದರೆಯೇ ಆಗಬಹುದಷ್ಟೆ!

ನಾವು ಸಹಾಯ ಮಾಡುವುದೇ ದೊಡ್ಡದಲ್ಲ, ಅದನ್ನು ಅರ್ಹರಿಗೆ ಮಾಡುವುದರಲ್ಲಿಯೇ ಅದರ ನಿಜವಾದ ಸಾರ್ಥಕತೆ ಇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT