ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ನೂರು ಸೂರ್ಯರು ಹುಟ್ಟಿದರೂ ನೂರು ಚಂದ್ರರು ಹುಟ್ಟಿದರೂ ಜ್ಞಾನಿ ಮಾತ್ರವೇ ನಮ್ಮ ಅಂತರಂಗದ ಅಜ್ಞಾನದ ಕತ್ತಲೆಯನ್ನು ಓಡಿಸಬಲ್ಲ. ಇಲ್ಲಿ ಸೂರ್ಯ–ಚಂದ್ರರು ಹೊರಗಿನ ಬೆಳಕಾಗಿ, ಎಂದರೆ ನಮ್ಮಿಂದ ದೂರ ನಿಲ್ಲುವ ಬೆಳಕಾಗಿ ಸುಭಾಷಿತ ಕಂಡಿದೆ. ಆದರೆ ಜ್ಞಾನಿ ಮಾತ್ರವೇ ನಮ್ಮ ಅಂತರಂಗವನ್ನು ಪ್ರವೇಶಿಸಬಲ್ಲ. ನಮ್ಮ ಜೊತೆ ಒಂದಾಗಬಲ್ಲವರು, ನಮ್ಮ ಹತ್ತಿರ ನಿಲ್ಲಬಲ್ಲವರು ಮಾತ್ರವೇ ನಮಗೆ ದಿಟವಾದ ಆಪ್ತರು, ಮಾರ್ಗದರ್ಶಕರು ಎಂಬುದು ಸುಭಾಷಿತದ ಇನ್ನೊಂದು ಧ್ವನಿ.