ಮಾನವನಷ್ಟು ಸ್ವಾರ್ಥ ಜೀವಿಯು ಈ ಜಗತ್ತಿನಲ್ಲಿ ಯಾವುದೂ ಇಲ್ಲವೆನಿಸುತ್ತದೆ. ಗಳಿಸಿದ ಆಸ್ತಿ, ಅಂತಸ್ತು, ಐಶ್ವರ್ಯದಿಂದ ತಾನು ಸುಖವನ್ನು ಅನುಭವಿಸುವುದಿಲ್ಲ. ಮತ್ತಷ್ಟು ಗಳಿಸಬೇಕೆಂಬ ಉದ್ದೇಶದಲ್ಲೇ ತನ್ನ ಜೀವನ ಕಳೆಯುತ್ತಾನೆ. ತನ್ನ ಹೊಟ್ಟೆಗೆ ಸರಿಯಾಗಿ ಹಾಕಿಕೊಳ್ಳದವನು, ಇನ್ನೊಬ್ಬರ ಹೊಟ್ಟೆಯನ್ನು ತಣ್ಣಗಿಡುತ್ತಾನೆಯೇ? ತಾನು ಚೆನ್ನಾಗಿ ಬಟ್ಟೆ ಹಾಕಿಕೊಳ್ಳದವನು ಬೇರೊಬ್ಬರಿಗೆ ಬಟ್ಟೆ ಕೊಡಿಸುತ್ತಾನೆಯೇ? ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳದವನು ಬಂಧು–ಬಳಗದವರನ್ನು ನೋಡಿಕೊಳ್ಳುತ್ತಾನೆಯೇ? ಸ್ವಾರ್ಥಿಯಾದವನು ಇವ್ಯಾವುದನ್ನೂ ಮಾಡುವುದಿಲ್ಲ. ತನ್ನವರಿಗೆ ಏನೂ ಮಾಡದವ ಗುರು, ಲಿಂಗ, ಜಂಗಮರಿಗೆ ಮಾಡಿಯಾನೆ? ಸತ್ಪುರುಷರು, ಮಹಾತ್ಮರು ಕೂಡ ಅವನ ಕಣ್ಣಿಗೆ ಕಾಣುವುದಿಲ್ಲ. ಇಂತಹ ವ್ಯಕ್ತಿಯು ಸಾಯುವಾಗ ಭಗವಂತನ ನೆನೆದರೆ ಏನು ಸಾರ್ಥಕ? ಭಗವಂತನು ಭಕ್ತರನ್ನು ಅರೆದು, ಕೊರೆದು, ಪರೀಕ್ಷೆ ಮಾಡುವ ಈ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳು ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ ಎನ್ನುವುದು ವಚನದ ಸಾರವಾಗಿದೆ. ಜೀವನದಲ್ಲಿ ಸ್ವಾರ್ಥ ಬಿಡಬೇಕು. ನಾಲ್ಕ ಜನರಿಗೆ ಒಳಿತು ಮಾಡಬೇಕು, ನೆರವಾಗಬೇಕು ಎಂಬ ಸಂದೇಶ ಇದರಲ್ಲಿದೆ.