ಭಗವಂತನ ನಾಮಸ್ಮರಣೆಯನ್ನು ನಾವು ಪ್ರತಿ ಹಂತದಲ್ಲೂ ಮಾಡುವ ಅಗತ್ಯವಿದೆ. ಬಾಲ್ಯದಲ್ಲಿ ತಂದೆ ತಾಯಿ ಜೊತೆಗೂಡಿ ದೇವರನ್ನು ಸ್ಮರಿಸಬೇಕು. ಯೌವನದಲ್ಲಿ ಬಳಗದವರೊಂದಿಗೆ ನೆನೆಯಬೇಕು. ಒಟ್ಟಾರೆ ಜೀವನದ ಪ್ರತಿ ಹಂತದಲ್ಲೂ ಭಗವಂತನ ನಾಮಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು. ಆದರೆ, ನಾವು ಬದುಕಿನ ಅಂತ್ಯ ಸಮಯದಲ್ಲಿ ಭಗವಂತನ ಕುರಿತಾದ ಚಿಂತನೆಯನ್ನು ಮಾಡುತ್ತೇವೆ. ಅದಕ್ಕೆ ಬಸವಣ್ಣನವರು ದೇಹವು ಸದೃಢವಾಗಿರುವಾಗಲೇ ಆಧ್ಯಾತ್ಮಿಕ ಚಿಂತನೆಯನ್ನು ಮಾಡಬೇಕು ಎಂದು ವಚನದ ಮೂಲಕ ತಿಳಿಸಿದ್ದಾರೆ. ವಯಸ್ಸಾದ ನಂತರ ದೇಹದ ಅಂಗಾಂಗಗಳು ಒಂದೊಂದಾಗಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅಂತಹ ಸಮಯದಲ್ಲಿ ಭಗವಂತನ ಆರಾಧನೆ ಕಷ್ಟವಾಗುತ್ತದೆ. ಆದರೂ ಜೀವನದ ಬಹು ಪಾಲು ಸಮಯದಲ್ಲಿ ನಾವು ಆಧ್ಯಾತ್ಮಿಕವಾಗಿರದಿದ್ದರೂ ಕೊನೆಗಾಲದಲ್ಲಾದರೂ ಭಗವಂತನನ್ನು ಪೂಜಿಸಬೇಕು ಎನ್ನುವುದು ಈ ವಚನದ ಸಾರಾಂಶವಾಗಿದೆ. ಪಾಲಿಸೋಣ.