ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸಾಕ್ಷ್ಯಚಿತ್ರ ನಿಷೇಧ ‘ಪರಂಪರೆ’

Last Updated 31 ಜನವರಿ 2023, 19:30 IST
ಅಕ್ಷರ ಗಾತ್ರ

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’- ಇದು ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಯ ಸುತ್ತ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಹೆಸರು. ಈ ಸಾಕ್ಷ್ಯಚಿತ್ರ ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ಈ ಸಾಕ್ಷ್ಯಚಿತ್ರದ ಲಿಂಕ್‌ ತೆಗೆದುಹಾಕುವಂತೆ ಸರ್ಕಾರ ಆದೇಶಿಸಿದೆ.ಭಾರತದಲ್ಲಿ ಸಾಕ್ಷ್ಯಚಿತ್ರ ಕುರಿತಂತೆ ವಿವಾದವಾಗಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು ಇದೇ ಮೊದಲೇನೂ ಅಲ್ಲ. ಸಾಕ್ಷ್ಯಚಿತ್ರ ಮತ್ತು ಭಾರತವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನ ಮಾಧ್ಯಮ ಸಂಸ್ಥೆ ಬಿಬಿಸಿಯೊಂದಿಗೆ ಹಲವು ಬಾರಿ ಜಟಾಪಟಿ ನಡೆದಿದೆ. ಜೊತೆಗೆ, ಭಾರತೀಯರು ಮತ್ತು ವಿದೇಶಿಯರು ನಿರ್ಮಿಸಿದ ಹಲವು ಸಾಕ್ಷ್ಯಚಿತ್ರಗಳ ಕುರಿತು ಕೂಡ ಆಕ್ಷೇಪಗಳು ವ್ಯಕ್ತವಾಗಿ ವಿವಾದಗಳಾಗಿವೆ

***

ಬಿಬಿಸಿ ನಿಷೇಧಕ್ಕೆ ಕಾರಣವಾದ ‘ಕಲ್ಕತ್ತಾ’

ಫ್ರಾನ್ಸ್‌ನ ಪ್ರಸಿದ್ಧ ಸಿನಿಮಾ ನಿರ್ದೇಶಕ ಲೂಯಿಸ್‌ ಮಲ್‌ ನಿರ್ದೇಶಿಸಿದ್ದ ‘ಕಲ್ಕತ್ತಾ’ ಎಂಬ ಹೆಸರಿನ ಸಾಕ್ಷ್ಯಚಿತ್ರವನ್ನು ಬಿಬಿಸಿ 1969ರಲ್ಲಿ ಪ್ರಸಾರ ಮಾಡಿತ್ತು. ‘ಈ ಸಾಕ್ಷ್ಯಚಿತ್ರವು ಕಲ್ಕತ್ತಾದ ಬಡತನವನ್ನೇ ಕೇಂದ್ರವಾಗಿ ಇರಿಸಿಕೊಂಡಿದೆ. ಹಾಗಾಗಿ, ಭಾರತವನ್ನು ಕೆಟ್ಟದಾಗಿ ಚಿತ್ರಿಸುವುದೇ ಇದರ ಉದ್ದೇಶ’ ಎಂದು ಆಗ ಆಕ್ಷೇಪ ವ್ಯಕ್ತವಾಗಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಗೂ ಸಾಕ್ಷ್ಯಚಿತ್ರವು ಅಸಮಾಧಾನ ತರಿಸಿತ್ತು. ಸಾಕ್ಷ್ಯಚಿತ್ರವು ಅತ್ಯಂತ ಹೆಚ್ಚು ‍ಪೂರ್ವಗ್ರಹ ಗಳಿಂದ ಕೂಡಿದೆ ಎಂಬ ದೂರನ್ನು ಭಾರತ ಸರ್ಕಾರವು ಬ್ರಿಟನ್‌ ಹೈಕಮಿಷನ್‌ಗೆ ನೀಡಿತ್ತು. ಆದರೆ, ಬಿಬಿಸಿಯ ವ್ಯವಹಾರದಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಬ್ರಿಟನ್‌ನ ವಿದೇಶಾಂಗ ಸಚಿವಾಲಯವು ಹೇಳಿತ್ತು. ಬಿಬಿಸಿಯ ಮೇಲೆ 1970ರ ಆಗಸ್ಟ್‌ 29ರಂದು ನಿಷೇಧ ಹೇರಲಾಯಿತು. ಆದರೆ ಆ ಸಂದರ್ಭದಲ್ಲಿ ಈಗಿನಂತೆ ವಿಷಯದ ಕುರಿತು ರಾಜಕೀಯ ಭಿನ್ನಾಭಿಪ್ರಾಯ ಇರಲಿಲ್ಲ. ಎಲ್ಲ ಪಕ್ಷಗಳೂ ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದವು.

ದೆಹಲಿಯಲ್ಲಿದ್ದ ಬಿಬಿಸಿ ಕಚೇರಿಯನ್ನು 15 ದಿನಗಳಲ್ಲಿ ಮುಚ್ಚುವಂತೆ ಬಿಬಿಸಿಯ ದೆಹಲಿ ಪ್ರತಿನಿಧಿ ಮಾರ್ಕ್‌ ಟಲ್ಲಿ ಮತ್ತು ವರದಿಗಾರ ರಾನಿ ರಾಬ್ಸನ್‌ ಅವರಿಗೆ ಸೂಚಿಸಲಾಯಿತು. ಸುಮಾರು ಎರಡು ವರ್ಷ ಕಾಲ ಬಿಬಿಸಿಯನ್ನು ಭಾರತದಿಂದ ಹೊರಕ್ಕೆ ಹಾಕಲಾಗಿತ್ತು. 1971ರ ಕೊನೆಯಲ್ಲಷ್ಟೇ ಬಿಬಿಸಿಗೆ ಭಾರತದಿಂದ ವರದಿ ಮಾಡಲು ಅವಕಾಶ ಕೊಡಲಾಯಿತು.

ಆಕ್ರೋಶಕ್ಕೆ ಕಾರಣವಾದ ‘ರಾಮ್‌ ಕೆ ನಾಮ್‌’

ಅಯೋಧ್ಯೆಯಲ್ಲಿದ್ದ 16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬರಿ ಮಸೀದಿಯನ್ನು ನೆಲಸಮಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ನಡೆಸಿದ್ದ ಅಭಿಯಾನದ ಕುರಿತು ಆನಂದ್ ಪಟವರ್ಧನ್‌ ಅವರು 1991ರಲ್ಲಿ ‘ರಾಮ್‌ ಕೆ ನಾಮ್‌’ ಎಂಬ ಹೆಸರಿನ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. 1992ರ ಸೆಪ್ಟೆಂಬರ್‌ನಲ್ಲಿ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ರಾಮ ಮಂದಿರ ನಿರ್ಮಾಣವಾ
ಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ ನಡೆಸಿದ ಅಭಿಯಾನ ಮತ್ತು ಮಂದಿರದ ಹೆಸರಿನಲ್ಲಿ ನಡೆದ ಕೋಮು ಹಿಂಸೆಯನ್ನು ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿತ್ತು. ಬಲಪಂಥೀಯ ಮುಖಂಡರೂ ಸೇರಿ ಹಲವರ ಸಂದರ್ಶನಗಳೂ
ಸಾಕ್ಷ್ಯಚಿತ್ರದಲ್ಲಿ ಇವೆ. ಸಿನಿಮಾ ಪ್ರಮಾಣೀಕರಣದ ಕೇಂದ್ರೀಯ ಮಂಡಳಿ (ಸಿಬಿಎಫ್‌ಸಿ), ಸಾಕ್ಷ್ಯಚಿತ್ರಕ್ಕೆ ಪ್ರಮಾಣಪತ್ರ ನೀಡುವಾಗ ಹಲವು ಕಡಿತಗಳನ್ನು ಸೂಚಿಸಿತ್ತು. ಬಳಿಕ ರಚಿಸಲಾದ ಹೊಸ ಸಮಿತಿಯು ಯಾವುದೇ ಕಡಿತ ಮಾಡದೆ ‘ಯು’ ಪ್ರಮಾಣಪತ್ರ ನೀಡಿತ್ತು.

1992ರ ಅತ್ಯುತ್ತಮ ತನಿಖಾ ಸಾಕ್ಷ್ಯಚಿತ್ರ ಎಂಬ ರಾಷ್ಟ್ರಪ್ರಶಸ್ತಿಯನ್ನೂ ಇದು ಪಡೆದುಕೊಂಡಿತ್ತು. ಆದರೆ, ದೂರದರ್ಶನವು ಇದನ್ನು ಪ್ರದರ್ಶನಕ್ಕೆ ಪರಿಗಣಿಸಲೇ ಇಲ್ಲ ಎಂಬುದು ವಿವಾದಕ್ಕೆ ಕಾರಣವಾಯಿತು. ಈ ವಿಚಾರವು ಕೋರ್ಟ್ ಮೆಟ್ಟಿಲು ಹತ್ತಿತ್ತು. ಬಾಂಬೆ ಹೈಕೋರ್ಟ್‌ 1997ರಲ್ಲಿ ಸೂಚನೆ ನೀಡುವವರಿಗೆ ಇದರ ಪ್ರಸಾರ ಸಾಧ್ಯವಾಗಲಿಲ್ಲ. ವಿಎಚ್‌ಪಿ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳು ಇದು ಪ್ರದರ್ಶನಗೊಂಡ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದವು. ನ್ಯೂಯಾರ್ಕ್‌ನ ಅಮೆರಿಕನ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿ 2002ರಲ್ಲಿ ಪ್ರದರ್ಶನ ಏರ್ಪಾಡಾಗಿತ್ತು. ಆದರೆ, ವಿಎಚ್‌ಪಿ ಪ್ರತಿಭಟನೆಯಿಂದಾಗಿ ಪ್ರದರ್ಶನ ರದ್ದು ಮಾಡಬೇಕಾಗಿ ಬಂತು. 2014ರಲ್ಲಿ ಕೆಲವೆಡೆ ಪ್ರದರ್ಶನದ ಪ್ರಯತ್ನ ನಡೆದಿತ್ತು. ಆಗಲೂ ಕೆಲವು ಸ್ಥಳಗಳಲ್ಲಿ ಪ್ರದರ್ಶನ ರದ್ದು ಮಾಡಬೇಕಾಗಿ ಬಂದಿತ್ತು. 2019ರಲ್ಲಿಯೂ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಪ್ರಯತ್ನವನ್ನು ನಡೆಸಲಾಗಿದೆ.

ಪ್ರದರ್ಶನವಾಗದ ‘ಇಂಡಿಯಾಸ್‌ ಡಾಟರ್‌’

ದೆಹಲಿಯಲ್ಲಿ 2012ರ ಡಿಸೆಂಬರ್‌ನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಬಿಬಿಸಿ, ‘ಇಂಡಿಯಾಸ್‌ ಡಾಟರ್‌’ ಎಂಬ ಹೆಸರಿನಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ಬ್ರಿಟನ್‌ನ ಸಿನಿಮಾ ನಿರ್ದೇಶಕ ಲೆಸ್ಲಿ ಉಡ್ವಿನ್‌ ಇದನ್ನು ನಿರ್ದೇಶಿಸಿದ್ದರು. ಕೃತ್ಯ, ಅದನ್ನು ಎಸಗಿದವರ ಬದುಕು, ಸಂತ್ರಸ್ತೆಯ ಮನೆಯವರ ಸಂದರ್ಶನ ಮುಂತಾದ ವಿಚಾರಗಳು ಸಾಕ್ಷ್ಯಚಿತ್ರದಲ್ಲಿ ಇದ್ದವು. ಆರೋಪಿಗಳಲ್ಲಿ ಒಬ್ಬನಾದ ಮುಕೇಶ್‌ ಸಿಂಗ್‌ ಸಂದರ್ಶನವೂ ಸಾಕ್ಷ್ಯಚಿತ್ರದಲ್ಲಿ ಇತ್ತು. ಈ ಸಂದರ್ಶನಕ್ಕೆ ಸರ್ಕಾರದ ಅನುಮತಿಯನ್ನು ಉಡ್ವಿನ್‌ ಅವರು ಪಡೆದಿಲ್ಲ ಎಂದೂ ಹೇಳಲಾಗಿತ್ತು.

ಸಾಕ್ಷ್ಯಚಿತ್ರವು ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದೆ ಮತ್ತು ಅವರ ಚಿತ್ರವನ್ನು ಪ್ರದರ್ಶಿಸಿದೆ. ಇದು ಭಾರತ ಮತ್ತು ಬ್ರಿಟನ್‌ನ ನಿಯಮಗಳಿಗೆ ವಿರುದ್ಧ ಎಂದು ಭಾರತ ಸರ್ಕಾರ ಹೇಳಿತ್ತು. ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಬಹುದು, ಅಪರಾಧಿಯನ್ನು ವೈಭವೀಕರಿಸಿದ್ದರಿಂದಾಗಿ ಅಪರಾಧ ಮನಸ್ಥಿತಿಯ ಜನರ ಮೇಲೆ ಇದು ಪ್ರಭಾವ ಬೀರಬಹುದು ಎಂಬುದು ಕೂಡ ನಿಷೇಧಕ್ಕೆ ಇತರ ಕಾರಣಗಳಾಗಿದ್ದವು.

‘ಈ ಸಾಕ್ಷ್ಯಚಿತ್ರವು ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಉದ್ದೇಶ ಹೊಂದಿದೆ’ ಎಂದು ಆಗ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಹೇಳಿದ್ದರು.

ಪ್ರಮಾಣಪತ್ರ ಸಿಗಲಿಲ್ಲ, ರಾಷ್ಟ್ರಪ್ರಶಸ್ತಿ ಬಂತು

2010ರಲ್ಲಿ ನಿರ್ಮಾಣವಾದ ‘ಇನ್‌ಶಾ ಅಲ್ಲಾ, ಫುಟ್ಬಾಲ್‌’ ವಿಚಿತ್ರ ರೀತಿಯಲ್ಲಿ ವಿವಾದ ಸೃಷ್ಟಿ ಮಾಡಿದೆ. ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಈ ಸಾಕ್ಷ್ಯ ಚಿತ್ರಕ್ಕೆ ಮೊದಲಿಗೆ ‘ಎ’ ಪ್ರಮಾಣಪತ್ರ ನೀಡಿತು. ಬಳಿಕ, ಸಾಕ್ಷ್ಯಚಿತ್ರವು ಬಿಡುಗಡೆಗೆ ಸಿದ್ಧವಾದಾಗ ಅದರ ಮೇಲೆ ನಿಷೇಧ ಹೇರಿತು.

ಕಾಶ್ಮೀರದ ಫುಟ್ಬಾಲ್‌ ಆಟಗಾರನೊಬ್ಬ ಆಡುವುದಕ್ಕೆ ಬ್ರೆಜಿಲ್‌ಗೆ ಹೋಗಲು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾನೆ. ಆದರೆ, ಅವರ ತಂದೆಯು ಉಗ್ರಗಾಮಿಯಾಗಿದ್ದ ಎಂಬ ಕಾರಣಕ್ಕೆ ಎರಡು ವರ್ಷ ಪಾಸ್‌ಪೋರ್ಟ್‌ ಸಿಗುವುದಿಲ್ಲ. ಸಾಕ್ಷ್ಯಚಿತ್ರವು ಈ ಆಟಗಾರನ ಕುರಿತದ್ದಾಗಿದೆ. ಆಗ ಮುಖ್ಯಮಂತ್ರಿಯಾಗಿದ್ದ ಉಮರ್ ಅಬ್ದುಲ್ಲಾ ಮಧ್ಯಪ್ರವೇಶಿಸಿದ ನಂತರ ಫುಟ್ಬಾಲ್‌ ಆಟಗಾರ ಬಷರತ್‌ ಬಷೀರ್‌ ಬಾಬಾಗೆ ಪಾಸ್‌ಪೋರ್ಟ್‌ ಸಿಗುತ್ತದೆ.

ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿದ್ದರಿಂದಾಗಿ ನಿರ್ದೇಶಕ ಅಶ್ವಿನ್‌ ಕುಮಾರ್‌ ಅವರು ಚಿತ್ರವನ್ನು ಖಾಸಗಿಯಾಗಿ ಹಂಚಿಕೊಂಡಿದ್ದರು ಮತ್ತು ಇಂಟರ್‌ನೆಟ್‌ನಲ್ಲಿ ಪಾಸ್‌ವರ್ಡ್‌ ಹಾಕಿ ಅಪ್‌ಲೋಡ್‌ ಮಾಡಿದ್ದರು. ಆದರೆ, ಈ ಚಿತ್ರಕ್ಕೆ ಅದೇ ವರ್ಷ ಸಾಮಾಜಿಕ ಪರಿಣಾಮ ಬೀರುವ ಅತ್ಯುತ್ತಮ ಸಾಕ್ಷ್ಯಚಿತ್ರ ಎಂಬ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಸರ್ಕಾರವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಭಾವಿಸಿ ಸಿಬಿಎಫ್‌ಸಿ ಸಾಕ್ಷ್ಯಚಿತ್ರಕ್ಕೆ ಪ್ರಮಾಣಪತ್ರವನ್ನು ನಿರಾಕರಿಸಿತ್ತು.

‘ಬ್ಯಾಟಲ್‌ ಫಾರ್ ಬನಾರಸ್‌’ಗೆ ಅಡ್ಡಿ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಕಮಲ್‌ ಸ್ವರೂಪ್‌ ನಿರ್ದೇಶನದ ‘ಬ್ಯಾಟಲ್‌ ಫಾರ್ ಬನಾರಸ್‌’ ಸಾಕ್ಷ್ಯಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿ 2015ರಲ್ಲಿ ನಿರಾಕರಿಸಿತು. ಲೋಕಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಅರವಿಂದ ಕೇಜ್ರಿವಾಲ್‌ ನಡುವೆ ವಾರಾಣಸಿಯಲ್ಲಿ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ವಾರಾಣಸಿಯಲ್ಲಿಯೇ ಇದ್ದ ಸ್ವರೂಪ್‌ ಮತ್ತು ಅವರ ತಂಡ ಚಿತ್ರೀಕರಣ ನಡೆಸಿತ್ತು.

‘ಇದೊಂದು ರಾಜಕೀಯ ವಿಡಂಬನೆ. ಸಾಕ್ಷ್ಯಚಿತ್ರದಲ್ಲಿ ಎಲ್ಲ ರಾಜಕಾರಣಿಗಳ ವಿರುದ್ಧ ಮಾತನಾಡಲಾಗಿದೆ. ಆದರೆ, ಈ ಸಾಕ್ಷ್ಯಚಿತ್ರವು ಅರವಿಂದ ಕೇಜ್ರಿವಾಲ್‌ ಅವರ ಪರವಾಗಿದೆ. ಸಾಕ್ಷ್ಯಚಿತ್ರದಲ್ಲಿ ಬಳಸಿದ ಭಾಷೆಯು ಸಾರ್ವಜನಿಕವಾಗಿ ವೀಕ್ಷಿಸುವಂತೆ ಇಲ್ಲ ಎಂದು ನನ್ನ ತಂಡವು ಹೇಳಿದೆ. ಇದು ಸಿಬಿಎಫ್‌ಸಿ ಮಾರ್ಗಸೂಚಿಗೆ ಅನುಸಾರವಾಗಿ ಇಲ್ಲ’ ಎಂದು ಸಿಬಿಎಫ್‌ಸಿಯ ಆಗಿನ ಅಧ್ಯಕ್ಷರು ಹೇಳಿದ್ದು ವರದಿಯಾಗಿತ್ತು.

ಸಿಬಿಎಫ್‌ಸಿ ಕ್ರಮವನ್ನು ಪ‍್ರಶ್ನಿಸಿ ಸ್ವರೂಪ್‌ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಮಾಣಪತ್ರ ನೀಡುವುದಿಲ್ಲ ಎಂಬ ತೀರ್ಮಾನವನ್ನು ಹೈಕೋರ್ಟ್‌ 2018ರಲ್ಲಿ ರದ್ದು ಮಾಡಿತ್ತು.

ಸತ್ಯಜಿತ್ ರೇ ಅವರನ್ನೂ ಬಿಡದ ‘ನಿಷೇಧ’

32 ರಾಷ್ಟ್ರ‌ಪ್ರಶಸ್ತಿಗಳನ್ನು ಪಡೆದಿರುವ ಪ್ರಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರಿಗೂ ನಿಷೇಧದ ಬಿಸಿ ತಾಗಿತ್ತು. 1971ರಲ್ಲಿ ಅವರು ನಿರ್ದೇಶಿಸಿದ್ದ ‘ಸಿಕ್ಕಿಂ’ ಹೆಸರಿನ ಸಾಕ್ಷ್ಯಚಿತ್ರಕ್ಕೆ ಭಾರತ ಸೇರಿ ಎರಡು ದೇಶಗಳು ನಿಷೇಧ ಹೇರಿದ್ದವು. ಸಿಕ್ಕಿಂ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರುವ ಮುನ್ನ, ಪಾಲ್ಡೆನ್ ತೋಂಡುಪ್ ನಾಮಗ್ಯಾಲ್ ಎಂಬ ದೊರೆಯ ಆಳ್ವಿಕೆಯಲ್ಲಿತ್ತು. ರಾಜ್ಯದ ಸಾರ್ವಭೌಮತೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಸತ್ಯಜಿತ್ ರೇ ಅವರಿಗೆ ಸಿಕ್ಕಿಂ ಕುರಿತ ಸಾಕ್ಷ್ಯಚಿತ್ರ ತಯಾರಿಸಲು ರಾಜ ನಿರ್ದೇಶಿಸಿದ್ದ. ರೇ ಅವರು ಸಿದ್ಧಪಡಿಸಿದ್ದ ಚಿತ್ರದ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತವಾಗಿತ್ತು ಎನ್ನಲಾಗಿದೆ. ಸಿಕ್ಕಿಂ ರಾಜ್ಯವು 1975ರಲ್ಲಿ ಭಾರತದ ಭಾಗವಾಯಿತು. ಸಿಕ್ಕಿಂ ಜನರ ಭಾವನೆಗೆ ಧಕ್ಕೆ ಉಂಟಾಗಬಾರದು ಎಂಬ ಉದ್ದೇಶದಿಂದ ಚಿತ್ರಕ್ಕೆ ನಿರ್ಬಂಧ ಹೇರಲಾಗಿತ್ತು ಎನ್ನಲಾಗಿದೆ. ಸುಮಾರು 35 ವರ್ಷಗಳ ಬಳಿಕ, 2010ರಲ್ಲಿ ನಿಷೇಧ ತೆರವು ಮಾಡಲಾಯಿತು. ಈ ಚಿತ್ರ ಯಾವುದೇ ರಾಜಕೀಯ ದುರುದ್ದೇಶದ ವಿಷಯವನ್ನು
ಒಳಗೊಂಡಿರಲಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಗುಜರಾತ್ ಗಲಭೆ ಕುರಿತ ಸಾಕ್ಷ್ಯಚಿತ್ರಕ್ಕೆ ನಿಷೇಧ

2002ರ ಗುಜರಾತ್ ಗಲಭೆಯ ವಸ್ತುವಾಗುಳ್ಳ ‘ಫೈನಲ್ ಸಲ್ಯೂಷನ್’ ಎಂಬ 208 ನಿಮಿಷಗಳ ಸಾಕ್ಷ್ಯಚಿತ್ರವನ್ನು ರಾಕೇಶ್ ಶರ್ಮಾ ಅವರು 2004ರಲ್ಲಿ ನಿರ್ದೇಶಿಸಿದ್ದರು. ಚಿತ್ರೀಕರಣದ ಸಮಯದಿಂದಲೂ ವಿರೋಧ ಎದುರಿಸಿದ್ದ ಶರ್ಮಾ ಅವರಿಗೆ, ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ಒಪ್ಪಲಿಲ್ಲ. ಹಿಂದೂ–ಮುಸ್ಲಿಮರ ಮಧ್ಯೆ ದ್ವೇಷವನ್ನು ಹರಡುವ ಹಾಗೂ ಹಿಂಸೆಯನ್ನು ಪ್ರಚೋದಿಸುವ ಅಂಶಗಳಿವೆ ಎಂಬ ಕಾರಣ ನೀಡಿತ್ತು. ಮುಂಬೈ ಅಂತರರಾಷ್ಟ್ರೀಯ ಚಿತ್ರೋತ್ಸವ ದಲ್ಲಿ ಸಿನಿಮಾ ಪ್ರದರ್ಶಿಸಲು ನಿರಾಕರಿಸಲಾಯಿತು. ಸರ್ಕಾರವೂ ಈ ಚಿತ್ರಕ್ಕೆ ನಿಷೇಧ ಹೇರಿತು. ಮತ್ತೊಂದೆಡೆ, ಚಿತ್ರದ ಪರವಾಗಿ ಅಭಿಯಾನವೂ ಶುರುವಾಯಿತು. ಸೆನ್ಸಾರ್ ವಿರೋಧಿ ಅಭಿಯಾನದ ವೇದಿಕೆಯಲ್ಲಿ ಚಿತ್ರ ಪ್ರದರ್ಶಿಸಲಾಯಿತು. ಕೆಲವು ತಿಂಗಳ ಬಳಿಕ ಯುಪಿಎ ಸರ್ಕಾರವು ನಿಷೇಧವನ್ನು ವಾಪಸ್ ಪಡೆಯಿತು. ಚಿತ್ರದ ಯಾವ ಭಾಗಕ್ಕೂ ಕತ್ತರಿ ಹಾಕಲಿಲ್ಲ. ಆದರೆ, ಪ್ರಚಾರದ ಕೊರತೆಯಿಂದಾಗಿ, ಹೆಚ್ಚು ಜನರನ್ನು ತಲುಪಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ.

‘ಮಜಫ್ಫರ್‌ನಗರ್ ಬಾಕಿ ಹೈ’

2013ರಲ್ಲಿ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ನಡೆದಿದ್ದ ಗಲಭೆಯನ್ನು ಚಿತ್ರಿಸುವ ‘ಮಜಫ್ಫರ್‌ನಗರ್ ಬಾಕಿ ಹೈ’ ಸಾಕ್ಷ್ಯಚಿತ್ರವು ವಿವಾದ ಸೃಷ್ಟಿಸಿತ್ತು. ನಕುಲ್ ಸಿಂಗ್ ಸಾಹ್ನಿ ನಿರ್ದೇಶನದ ಈ ಚಿತ್ರವನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶಿಸುವ ಯತ್ನಗಳು ನಡೆದಿದ್ದವು. ಆದರೆ, ಎಬಿವಿಪಿ ವಿರೋಧದಿಂದಾಗಿ ಚಿತ್ರ ಪ್ರದರ್ಶನ ಸಾಧ್ಯವಾಗಲಿಲ್ಲ. ಇದು ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಸಂಘ ಹಾಗೂ ಎಬಿವಿಪಿ ನಡುವೆ ಜಟಾಪಟಿಗೂ ಕಾರಣವಾಗಿತ್ತು. ಆದರೂ, 50ಕ್ಕೂ ನಗರಗಳಲ್ಲಿ ಚಿತ್ರ ಪ್ರದರ್ಶಿಸಲಾಗದೆ.ಅಪಾರ್ಟ್‌ಮೆಂಟ್‌ಗಳು, ತರಗತಿ ಕೋಣೆಗಳಲ್ಲೂ ಪ್ರದರ್ಶನ ಏರ್ಪಡಿಸಲಾಗಿತ್ತು.ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಪ್ರದರ್ಶನಕ್ಕೆ ತಡೆ ಒಡ್ಡಲಾಗಿತ್ತು.

ಆಧಾರ: ಪಿಟಿಐ, ಚಿತ್ರ–ಐಎಂಡಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT