‘ಇಸ್ಕಾನ್ ನನ್ನ ಮೇಲೆ ಆಗಾಧವಾದ ಪ್ರಭಾವ ಬೀರಿದೆ. ಭಾರತೀಯ ಪರಂಪರೆಗೆ ಮಾರು ಹೋಗಿದ್ದೇನೆ. ಸಾವಯವ ಕೃಷಿಯೇ ನನ್ನ ಉಸಿರು ಎಂದು ಹೇಳುವ ರಾಜುಗೌಡ ಪ್ರತಿ ವರ್ಷ ಒಂದು ಎಕರೆ ಜಮೀನನ್ನು ಸಾವಯವ ಕೃಷಿಯ ನೆಲೆಯಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಈಗ ಏಳು ಎಕರೆಯಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದಾರೆ. ಹೊಲದ ಕೆಲಸಕ್ಕೆ ಟ್ರ್ಯಾಕ್ಟರ್ ಬಳಸುವುದಿಲ್ಲ. ಕೇವಲ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಮಾತ್ರ ಉಪಯೋಗಿಸುತ್ತಾರೆ. ಉಳಿದೆಲ್ಲ ಕೆಲಸಗಳಿಗೆ ಎತ್ತುಗಳ ನೆರವು ಪಡೆಯಲಾಗುತ್ತಿದೆ. ಕುಟುಂಬದ ಒಡೆತನದಲ್ಲಿರುವ 80 ಎಕರೆ ತೋಟಕ್ಕೆ ಕೊಳವೆ ಬಾವಿಯ ಮೂಲಕ ಸಂಪೂರ್ಣ ನೀರಾವರಿ ಮಾಡಲಾಗಿದೆ. ತೋಟದಲ್ಲಿ ಕಬ್ಬು, ಸದಕ, ಗೋವಿನ ಜೋಳ ಬೆಳೆಯಲಾಗುತ್ತಿದೆ. ಪ್ರತಿ ವರ್ಷ 200 ಟನ್ ಕಬ್ಬು ಬೆಳೆಯಲಾಗುತ್ತಿದೆ. 150 ಕ್ವಿಂಟಲ್ ಸದಕ, 200 ಕ್ವಿಂಟಲ್ ಗೋವಿನಜೋಳ ಬೆಳೆಯುತ್ತಾರೆ.