ಬಾಗಲಕೋಟೆ: ಬಿಜೆಪಿ ಹೈಕಮಾಂಡ್ ರಾಜಾಹುಲಿಯನ್ನು (ಸಿಎಂ ಬಿ.ಎಸ್.ಯಡಿಯೂರಪ್ಪ) ಬೋನಿನಿಂದ ಹೊರಬಿಡುತ್ತಿಲ್ಲ. ಹೀಗಾಗಿಯೇ ಸಂಪುಟ ಪುನಾರಚನೆ ವಿಚಾರ ಕಗ್ಗಂಟಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಶುಕ್ರವಾರ ಇಲ್ಲಿ ವ್ಯಂಗ್ಯವಾಡಿದರು.
‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ’ ಎಂದು ಹಿಂದೆ ಜನ ಮಾತಾಡುತ್ತಿದ್ರು. ಆದರೆ ಈಗ ಯಾಕೆ ಯಡಿಯೂರಪ್ಪ ಹೈಕಮಾಂಡ್ ಮರ್ಜಿ ಕಾಯುತ್ತಿದ್ದಾರೋ ಗೊತ್ತಿಲ್ಲ ಎಂದು ಛೇಡಿಸಿದರು.
ಯಡಿಯೂರಪ್ಪಗೆ ರಾಜಾಹುಲಿ ಎಂದು ಕರೆಯುತ್ತಾರೆ. ಅವರು ಹಿರಿಯರಿದ್ದಾರೆ. ನನಗೂ ಅವರ ಬಗ್ಗೆ ಗೌರವವಿದೆ. ನಿಜಲಿಂಗಪ್ಪನವರ ಹಾಗೆ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಆದರೆ ಕೆಲಸ ಮಾಡಲು ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಅವಕಾಶ ಕೊಡುತ್ತಿಲ್ಲ. ಹಾಗೆಂದು ನಾನು ಯಡಿಯೂರಪ್ಪ ಸಲುವಾಗಿ ಮರುಕ ಪಡೋದಿಲ್ಲ.
ರಾಜ್ಯದ ಜನತೆ ಹಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೇಗನೇ ಮಂತ್ರಿಮಂಡಲ ರಚನೆ ಮಾಡಲು ಬಿಜೆಪಿಯವರು ಯಡಿಯೂರಪ್ಪಗೆ ಅವಕಾಶ ಮಾಡಿಕೊಡಬೇಕು ಎಂದರು.
ರಾಜ್ಯದ ಖಜಾನೆ ಖಾಲಿಯಾಗಿದೆ
ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಕೆಳಮನೆ, ಮೇಲ್ಮನೆ ಶಾಸಕರು 300 ಜನರಿದ್ದೇವೆ.ವರ್ಷಕ್ಕೆ ₹ 2 ಕೋಟಿ ಪ್ರದೇಶಾಭಿವೃದ್ಧಿ ನಿಧಿ ಕೊಡಬೇಕು ಎಂದು ಒತ್ತಾಯಿಸಿದರು.
2019-20ನೇ ಸಾಲಿನ ಹಣಕಾಸು ವರ್ಷದ 10 ತಿಂಗಳು ಈಗಾಗಲೇ ಗತಿಸಿದೆ. ಹಣಕಾಸು ವರ್ಷ ಮುಗಿಯುವುದಕ್ಕೆ ಎರಡು ತಿಂಗಳು ಬಾಕಿ ಉಳಿದಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ₹ 2 ಕೋಟಿಯಲ್ಲಿ ₹ 50 ಲಕ್ಷ ಮಾತ್ರ ಕೊಟ್ಟಿದ್ದಾರೆ. ಉಳಿದ ಹಣ ಇನ್ನೂ ಕೊಟ್ಟಿಲ್ಲ ಎಂದು ನುಡಿದರು.
ಹಿಂದಿನ ಸಾಲಿನ ₹ 39 ಲಕ್ಷ ಹಣ ಇನ್ನು ಬಂದಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಇದೊಂದೇ ನಿದರ್ಶನ ಸಾಕಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಪ್ರಶ್ನಿಸಿದರು.