ಹಗರಿಬೊಮ್ಮನಹಳ್ಳಿ: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ಗುರುವಾರ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಕಿನ್ನಾಳ್ ಪೊರಮಾಂಬೆ ಗುರುಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿತ್ತು.
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕೆ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೌಢಶಾಲೆಯ ಮುಖ್ಯಗುರುಗಳಾದ ಎ.ಎಸ್. ಚವ್ಹಾಣ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ವಿಜ್ಞಾನ ಮೇಳಗಳ ಸದುಪಯೋಗ ಪಡೆಯಲು ಕೋರಿದರು.
ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕ ಕೆ.ವಿ. ಲೋಕೇಶ್ ಉಪನ್ಯಾಸ ನೀಡಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತವೆ. ಜೊತೆಗೆ ವಿಜ್ಞಾನ ಕುರಿತಂತೆ ಕುತೂಹಲ ಹಾಗೂ ವೈಚಾರಿಕ ಚಿಂತನೆಗಳು ವಿಕಸನವಾಗುತ್ತವೆ ಎಂದು ತಿಳಿಸಿದರು.
ಪ್ರತಿಷ್ಠಾನದ ಕುಮಾರ್ ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಔಚಿತ್ಯ ವಿವರಿಸಿದರು. ಶಿಕ್ಷಕರಾದ ರಾಜೇಶ್ವರಿ, ಮುಸ್ತಾಕ್, ಕೋರಿ ದೊಡ್ಡಬಸಪ್ಪ, ರೆಡ್ಡಿ ನಾಯ್ಕ, ಪ್ರತಿಷ್ಠಾನದ ಮೆಹಬೂಬ್ಬಾಷಾ ನಾಗೇಶ್ ಉಪಸ್ಥಿತರಿದ್ದರು. ಶಿಕ್ಷಕ ಕಲ್ಗುಡಿ ಸ್ವಾಗತಿಸಿದರು. ಬಿ.ಎಸ್. ಮಾಧವ ಮತ್ತು ಎಸ್.ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.