ದೇವನಹಳ್ಳಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ 3939 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಪೈಕಿ 2914 ಕ್ವಿಂಟಾಲ್ ಜಿಲ್ಲೆಯ ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಿರೀಶ್ ಹೇಳಿದರು.
ಮುಂಗಾರು ಕೃಷಿ ಚಟುವಟಿಕೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ಕಳೆದ ವರ್ಷ ಮುಂಗಾರಿನಲ್ಲಿ 2041.14 ಕ್ವಿಂಟಾಲ್ ಬೀಜ ಮಾತ್ರ ವಿತರಣೆಯಾಗಿತ್ತು. ಪ್ರಸ್ತುತ ಸಾಲಿನಲ್ಲಿ 51 ಹೆಕ್ಟರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಬಹುತೇಕ ರೈತರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಮೀನು ಹಸನು ಮಾಡಿಕೊಳ್ಳುವ ಸಿದ್ಧತೆಯಲ್ಲಿ ಇದ್ದಾರೆ.
ಕೃಷಿ ಮತ್ತು ನೀರಾವರಿ ವ್ಯಾಪ್ತಿಯಲ್ಲಿ ದೇವನಹಳ್ಳಿ 10,988, ದೊಡ್ಡಬಳ್ಳಾಪುರ ತಾಲ್ಲೂಕು 22800, ಹೊಸ ಕೋಟೆ ತಾಲ್ಲೂಕು 10.696, ನೆಲಮಂಗಲ ತಾಲ್ಲೂಕು 15055 ಹಕ್ಟೇರ್ ಜಮೀನು ಇದೆ. ಜಿಲ್ಲೆಯಲ್ಲಿ ಒಟ್ಟು 58,746 ಹೆಕ್ಡೇರ್ನಲ್ಲಿ ಬೆಳೆ ವಿಸ್ತೀರ್ಣದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಪಿಡಿತ ಎಂದು ಘೋಷಣೆಯಾಗಿದ್ದ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 195 ಗ್ರಾಮಗಳಲ್ಲಿ ಮಳೆಯಾಶ್ರಿತ ರಾಗಿ ಬೆಳೆ ನಷ್ಟದ ಒಟ್ಟು 17091 ಫಲಾನುಭವಿಗಳ ಪೈಕಿ 2744 ರೈತರಿಗೆ 36,25 ಲಕ್ಷ ತಂತ್ರಾಂಶದಿಂದ ವರ್ಗಾಯಿಸಲಾಗಿದೆ ಎಂದು ಹೇಳಿದರು.
ರಸಗೊಬ್ಬರ: ಪ್ರಸ್ತುತ ಮುಂಗಾರಿನ ಕೃಷಿ ಚಟುವಟಿಕೆಗೆ 27,445 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಕೋರಿದ್ದು 3,200 ಮೆಟ್ರಿಕ್ ಟನ್ ಸರಬರಾಜಾಗಿದ್ದು 2960 ಮೆಟ್ರಿಕ್ ಟನ್ ವಿತರಣೆಮಾಡಲಾಗಿದೆ. ಕಳೆದ ವರ್ಷ 6984 ಮೆಟ್ರಿಕ್ ಟನ್ ಸೇರಿ ಪ್ರಸ್ತುತ 7349 ಮೆಟ್ರಿಕ್ ಟನ್ ಖಾಸಗಿ ಮತ್ತು ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.
2018–19 ಸಾಲಿನಲ್ಲಿ ವರ್ಷದ ವಾಡಿಕೆ ಮಳೆ 809 ಮಿ.ಮೀ ಪೈಕಿ 714 ಮಿ.ಮೀ ಬಂದಿತ್ತು. ಶೇ.12 ರಷ್ಟು ಕಡಿಮೆ ದಾಖಲಾಗಿತ್ತು ಪ್ರಸ್ತುತ ಸಾಲಿನಲ್ಲಿ ಜ.1 ರಿಂದ ಮೇ 31 ರವರೆಗೆ ವಾಡಿಕೆ ಮಳೆ 139.6 ಮಿ.ಮೀ ಗೆ 162.9 ಮಿ.ಮೀ ವಾಸ್ತವ ಮಳೆಯಾಗಿರುವುದು ರೈತರಿಗೆ ಖುಷಿ ತಂದಿದೆ. ಕಳೆದ ವರ್ಷದ ಆಗಸ್ಟ್, ಸೆಪ್ಟಂಬರ್, ಆಕ್ಟೋಬರ್ ಮತ್ತು ನವಂಬರ್ ಮಾಹೆಗಳಲ್ಲಿ ಗಣನೀಯವಾಗಿ ಶೇ.39,40,54 ಮತ್ತು 85 ರಷ್ಟು ಕಡಿಮೆ ಮಳೆ ಬಂದ ಪರಿಣಾಮ ತೇವಾಂಶದ ಕೊರತೆಯಿಂದ ಬೆಳೆ ನಷ್ಟವಾಗಿತ್ತು,
2018–19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 2515 ವಿಸ್ತೀರ್ಣದ ಗುರಿ ಪೈಕಿ 1468 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಸ್ತೀರ್ಣವಾಗಿತ್ತು. ಈ ಪೈಕಿ 988.64 ಹೆಕ್ಟೇರ್ ಹುರುಳಿ ಬೆಳೆ ನಷ್ಟವಾಗಿದೆ, ಪ್ರಸ್ತುತ ಸಾಲಿನ ಮುಂಗಾರಿನ ಹಂಗಾಮಿನಲ್ಲಿ 3938 ಕ್ವಿಂಟಾಲ್ ಬಿತ್ತನೆ ಬೀಜಗಳಾದ ತೊಗರಿ, ಮುಸುಕಿನ ಜೋಳ ಮತ್ತು ರಾಗಿ , ಕಡಲೆಕಾಯಿ ಬೀಜದ ಬೇಡಿಕೆ ಪೈಕಿ ಒಟ್ಟು 914.4 ಕ್ವಿಂಟಾಲ್ ಪೂರೈಕೆ ಮಾಡಲಾಗಿದೆ.
ಆ.14 ರೊಳಗೆ ಜಿಲ್ಲೆಯ ಎಲ್ಲ ರೈತರರು ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಳ್ಳಬೇಕು. ರೈತರು ತಮ್ಮ ಫಸಲಿನ ಭೂಮಿಯನ್ನು ಆಳವಾಗಿ ಉಳುಮೆ ಮಾಡಿದರೆ ತೇವಾಂಶ ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗಲಿದೆ, ಬೀಜ ಮತ್ತು ಗೊಬ್ಬರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.