ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ನಾಲ್ಕು ತಿಂಗಳ ನಂತರ ಗ್ರಾಹಕರಿಗೆ ಲಭ್ಯವಾದ ನಂದಿನಿ ಬೆಣ್ಣೆ

Published 22 ಆಗಸ್ಟ್ 2023, 16:53 IST
Last Updated 22 ಆಗಸ್ಟ್ 2023, 16:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆಂಧ್ರಪ್ರದೇಶದ ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಕೆಗೆ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪ ನಿಂತು ಹೋದ ಪರಿಣಾಮ ನಗರದ ನಂದಿನಿ ಹಾಲು ಮಾರಾಟ ಕೇಂದ್ರಗಳಲ್ಲಿ ಗ್ರಾಹಕರು ಕೇಳಿದಷ್ಟು ಬೆಣ್ಣೆ, ತುಪ್ಪ ಲಭ್ಯವಾಗುತ್ತಿದೆ. ಆದರೆ, ಹಾಲು ಸರಬರಾಜಿನಲ್ಲಿ ಇನ್ನೂ ಚೇತರಿಸಿಕೊಂಡಿಲ್ಲ ಎನ್ನುತ್ತಾರೆ ನಗರದ ಎಪಿಎಂಸಿ ಸಮೀಪದ ನಂದಿನಿ ಹಾಲು ಮಾರಾಟ ಕೇಂದ್ರದ ಶಿವಕುಮಾರ್‌.

ಏಪ್ರಿಲ್‌ ತಿಂಗಳಿಂದ ಈಚೆಗೆ ನಂದಿನಿ ಹಾಲು ಸರಬರಾಜು ಕುಸಿತವಾಗಿರುವುದು ಒಂದು ಕಡೆಯಾದರೆ ಬೆಣ್ಣೆ, ತುಪ್ಪದ ಸರಬರಾಜು ಸಂಪೂರ್ಣವಾಗಿ ನಿಂತೇ ಹೋಗಿತ್ತು. ಮಂಗಳವಾರ ನಗರದ ವಿವಿಧ ನಂದಿನಿ ಹಾಲಿನ ಕೇಂದ್ರಗಳ ಬೇಡಿಕೆಗೆ ತಕ್ಕಷ್ಟು ಬೆಣ್ಣೆ, ತುಪ್ಪ ಸರಬರಾಜಾಗಿದೆ. ಆದರೆ, ಹಾಲು ಸರಬರಾಜು ಇನ್ನೂ ಬೇಡಿಕೆಗೆ ತಕ್ಕಷ್ಟು ಲಭ್ಯವಾಗುತ್ತಿಲ್ಲ. ಹಬ್ಬದ ಸಾಲುಗಳು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಬೆಣ್ಣೆ, ತುಪ್ಪ ಸರಬರಾಜು ಆಗಿರುವುದು ಸಮಾಧಾನ ತಂದಿದೆ.

ನಾಲ್ಕು ತಿಂಗಳಿನಿಂದಲೂ ಗ್ರಾಹಕರಿಗೆ ಬೆಣ್ಣೆ, ತುಪ್ಪ ಇಲ್ಲ ಎಂದು ಹೇಳುವುದೇ ಬೇಸರವಾಗುತ್ತಿತ್ತು. ಹಾಲು ಮಾರಾಟ ಕೇಂದ್ರದಲ್ಲಿ ಪ್ರಮುಖವಾಗಿ ಇರಬೇಕಾದ ವಸ್ತುಗಳೇ ಮಾರಾಟಕ್ಕೆ ಲಭ್ಯ ಇಲ್ಲವಾದರೆ ವ್ಯಾಪಾರ ಮಾಡುವುದಾದರೂ ಹೇಗೆ ಎನ್ನುತ್ತಾರೆ ಟಿಎಪಿಎಂಸಿಎಸ್‌ ಆವರಣದ ನಂದಿನಿ ಹಾಲಿನ ಕೇಂದ್ರದ ಮಾರಾಟಗಾರ ಮಂಜುನಾಥ್‌.

‘ನಂದಿನಿ ಬೆಣ್ಣೆ ನಮಗೆ ಹೆಚ್ಚು ಇಷ್ಟವಾದದ್ದು. ಆದರೆ, ನಾಲ್ಕೈದು ತಿಂಗಳಿಂದ ಬೆಣ್ಣೆ ಸರಬರಾಜು ಇಲ್ಲದೆ ಬೇಸರ ತರಿಸಿತ್ತು. ಇಂದು ನಂದಿನಿ ಕೇಂದ್ರದಲ್ಲಿ ಬೆಣ್ಣೆ ನೋಡಿ ಖುಷಿ ತಂದಿದೆ’ ಎಂದು ಗ್ರಾಹಕಿ ಸುಮಲತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT