ಚಿಂತಾಮಣಿ: ಕುರುಬೂರಿನ ಕೃಷಿ ಮತ್ತು ರೇಷ್ಮೆ ಕಾಲೇಜಿನ ಸಹಯೋಗದಲ್ಲಿ ತಾಲ್ಲೂಕಿನ ಮೂಡ್ಲಚಿಂತಲಹಳ್ಳಿಯ ಪ್ರಗತಿಪರ ರೈತ ಲೋಕೇಶರೆಡ್ಡಿ ಅವರ ತೋಟದಲ್ಲಿ ರೂಡಿ ಬೀಟ್ರೂಟ್ ತಳಿಯ ಕ್ಷೇತ್ರೋತ್ಸವವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಕಾಲೇಜಿನ ತೋಟಗಾರಿಕೆ ವಿಭಾಗದ ಪ್ರೊ. ಶಿವಪ್ಪ ಅವರು ಬೀಟ್ರೂಟ್ ರೂಡಿ ತಳಿಯ ಗುಣ ಲಕ್ಷಣ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಮಳೆಗಾಲ ಮತು ಚಳಿಗಾಲಕ್ಕೆ ರೂಡಿ ಸೂಕ್ತವಾದ ತಳಿಯಾಗಿದೆ. ರೋಗಕ್ಕೆ ಉತ್ತಮವಾದ ಸಹಿಷ್ಣುತೆ ಹೊಂದಿರುತ್ತದೆ. ಉತ್ತಮವಾದ ಮತ್ತು ಏಕರೂಪತೆಯ ಗಡ್ಡೆಗಳು ಬಂದಿರುತ್ತವೆ. ಅತ್ಯುತ್ತಮ ಆಕಾರ, ಗಾತ್ರ ಮತ್ತು ಹೊಳಪು ಹೊಂದಿದ್ದು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಗಮನ ಸೆಳೆಯುತ್ತವೆ ಎಂದರು.
ಬೀಟ್ರೂಟ್ ಬೇಸಾಯಕ್ರಮ ಪದ್ಧತಿ ಹಾಗೂ ನೀರಾವರಿ ನಿರ್ವಹಣೆ ಬಗ್ಗೆ ಪ್ರಗತಿಪರ ರೈತರೊಂದಿಗೆ ಚರ್ಚೆ, ಸಂವಾದ ನಡೆಸಿ, ಅವರ ಸಂದೇಹ ನಿವಾರಿಸಿದರು.
ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಮಂಜುನಾಥ್ ಮಾತನಾಡಿ, ಇತ್ತೀಚೆಗೆ ರೈತರ ತೋಟಗಳಲ್ಲಿ ಕಂಡುಬರುತ್ತಿರುವ ಟೊಮೆಟೊ ವೈರಸ್ ನಿರ್ವಹಣೆ ಹಾಗೂ ಬೆಳೆ ತಿರುಗುವಿಕೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು
ರೇಷ್ಮೆ ಬೆಳೆಯ ಬೇಸಾಯ ಪದ್ಧತಿ, ರೇಷ್ಮೆ ಹುಳುಗಳಿಗೆ ತಗಲುವ ರೋಗ, ಹಿಪ್ಪುನೇರಳೆ ಸೊಪ್ಪಿನ ತಳಿ, ರೇಷ್ಮೆ ಉಳುಗಳ ತಳಿ ಹಾಗೂ ನಿರ್ವಹಣೆ ಕುರಿತು ರೇಷ್ಮೆ ಕೃಷಿ ಕಾಲೇಜಿನ ಪ್ರೊ. ರಾಮಕೃಷ್ಣ ನಾಯಕ್ ವಿವರ ನೀಡಿದರು.
ಪ್ರಗತಿಪರ ರೈತ ಲೋಕೇಶರೆಡ್ಡಿ ರೂಡಿ ಬೀಟ್ರೂಟ್ ತಳಿ ಬೆಳೆಯುವುದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡು, ರೈತರು ರೂಡಿ ತಳಿಯನ್ನು ಧೈರ್ಯವಾಗಿ ಬೆಳೆಯಬುದು. ಅಗತ್ಯವಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ತಾವು ಒದಗಿಸುವುದಾಗಿ ಭರವಸೆ ನೀಡಿದರು.
ಖಾಸಗಿ ಕಂಪನಿಯ ಸೀನಿಯರ್ ಮ್ಯಾನೇಜರ್ ಮಂಜುಪ್ರಕಾಶ್, ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜು ಹಾಗೂ 150ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.