ವಿಜಯಪುರ: ಕಾಮಗಾರಿ ಪ್ರದೇಶದಲ್ಲಿ ರಕ್ಷಣಾ ಕ್ರಮ ಇಲ್ಲದ ಕಾರಣ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ದ್ವಿಚಕ್ರ ವಾಹನ ಸವಾರ ಚನ್ನೇಗೌಡ (60)ಚನ್ನರಾಯಪಟ್ಟಣ ಹೋಬಳಿ ಐಬಸಾಪುರದಲ್ಲಿ ಸೇತುವೆ ಕಾಮಗಾರಿ ಪ್ರದೇಶದಲ್ಲಿ ಅಪಘಾತದಿಂದ ಮೃತಪಟ್ಟಿದ್ದರು.ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕಗಳು ಅಳವಡಿಸಿಲ್ಲ. ಪಕ್ಕದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳು ಕೈಗೊಂಡಿಲ್ಲ. ಗುದ್ದಲಿಪೂಜೆ ಮಾಡಿ ಹೋದ ನಂತರ ಇಕ್ಕೆಲಗಳಲ್ಲಿ ಟೇಪ್ ಕಟ್ಟಿದ್ದಾರೆ. ರಾತ್ರಿಯ ವೇಳೆ ಇಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ರಸ್ತೆ ಅಗಲ ಮಾಡಬೇಕಾಗಿತ್ತು ಮಾಡಿಲ್ಲ. ಆದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಮೃತರ ಪುತ್ರ ಸಂದೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಗುತ್ತಿಗೆದಾರ ಮುರಳಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಪ್ಪ, ಎಂಜಿನಿಯರ್ ಶಂಕರಪ್ಪ ಅವರ ಮೇಲೆ ದೂರು ದಾಖಲಿಸಿದ್ದಾರೆ.