ವಿಜಯಪುರ: ಹೋಬಳಿಯ ವೆಂಕಟಗಿರಿಕೋಟೆ ಆವತಿಯ ಮೂಲಕ ಬೆಂಗಳೂರಿನ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರ ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡುವಂತೆ ಎಷ್ಟೇ ಮನವಿಗಳನ್ನು ಕೊಟ್ಟರೂ ಇಲಾಖೆಗಳ ಕಿವಿಗಳು ಹಿತ್ತಾಳೆ ಕಿವಿಗಳಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಬುಳ್ಳಹಳ್ಳಿ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಹೈದರಾಬಾದ್ನಿಂದ ಅನಂತಪುರ, ಬಾಗೇಪಲ್ಲಿಯ ಮೂಲಕ ಬೆಂಗಳೂರಿಗೆ ಹೋಗುವ ಮುಖ್ಯ ಹೆದ್ದಾರಿಯಾಗಿದ್ದರೂ ಹೆಚ್ಚು ಜನದಟ್ಟಣೆ ಇರುವ ಈ ಭಾಗದಲ್ಲಿನ ರಸ್ತೆಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.
ಬೆಳಗಿನ ಜಾವ 4 ರಿಂದ 6 ಗಂಟೆಯವರೆಗೂ ಹೆಚ್ಚು ಭಾರಿ ವಾಹನಗಳು ಸಂಚರಿಸುತ್ತವೆ. 5 ಗಂಟೆ ಹೊತ್ತಿಗೆ ವೆಂಕಟಗಿರಿಕೋಟೆಗೆ ದ್ರಾಕ್ಷಿ ಕಟಾವು ಮಾಡಲಿಕ್ಕೆ ಹೋಗುವಂತಹ 500 ಕ್ಕೂ ಹೆಚ್ಚು ಕಾರ್ಮಿಕರು ಜಮಾಯಿಸುತ್ತಾರೆ ಎಂದಿದ್ದಾರೆ.
ಕಾರ್ಮಿಕರನ್ನು ಕರೆದೊಯ್ಯಲು ಟೆಂಪೊಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ನಿಂತಿರುತ್ತವೆ. ರಾತ್ರಿಯ ನಿದ್ದೆ ಮಂಪರಿನಲ್ಲೇ ವಾಹನಗಳನ್ನು ಚಾಲನೆ ಮಾಡಿಕೊಂಡು ಬರುವ ಚಾಲಕರು ಎಕ್ಸಲೇಟರ್ ಮೇಲೆ ಕಲ್ಲುಗಳನ್ನು ಇಟ್ಟು ಚಾಲನೆ ಮಾಡುತ್ತಾರೆ. ಈ ವೇಳೆ ರಸ್ತೆಗಳನ್ನು ದಾಟುವಂತಹ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದಿದ್ದಾರೆ.
ಹಗಲಿನಲ್ಲಿ ಅಪಘಾತಗಳಾದರೆ ಚಿಕ್ಕಬಳ್ಳಾಪುರ, ಇಲ್ಲವೇ ದೇವನಹಳ್ಳಿಯ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸಾಗಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಶಾಸಕರು, ಹೆದ್ದಾರಿ ಪ್ರಾಧಿಕಾರಗಳಿಗೆ ದೂರುಗಳನ್ನು ಕೊಟ್ಟಿದ್ದೇವೆ ಆದರೂ ಯಾವುದೇ ಪ್ರಯೋಜನಗಳಾಗಿಲ್ಲ ಎಂದಿದ್ದಾರೆ.
ಬುಳ್ಳಹಳ್ಳಿ ಗೇಟ್ ಸಮೀಪದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.