ಉಯ್ಯಂಬಳ್ಳಿ(ಕನಕಪುರ): ಮನುಷ್ಯರಲ್ಲಿ ಶಿಸ್ತು, ಸಂಯಮ, ಜಾಗೃತಿ, ಸಂಸ್ಕಾರ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಬೆಂಗಳೂರು ಕೆಎಸ್ಐಟಿ ಪ್ರಾಂಶುಪಾಲ ಡಾ.ಟಿ.ವಿ.ಗೋವಿಂದರಾಜು ತಿಳಿಸಿದರು.
ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮ ಸ್ವರಾಜ್ಯ ಪ್ರೌಢಶಾಲೆಯಲ್ಲಿ ರಘುವನಹಳ್ಳಿ ಕೆ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ವಿದ್ಯಾರ್ಥಿಗಳ ವಿಶೇಷ ವಾರ್ಷಿಕ ಶಿಬಿರದಲ್ಲಿ 'ಗ್ರಾಮಗಳ ಅಭಿವೃದ್ಧಿ ಕಡೆಗೆ ಯುವಶಕ್ತಿ ನಡಿಗೆ' ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಗ್ರಾಮಗಳ ಅಭಿವೃದ್ಧಿ ಕಡೆಗೆ ಹೆಚ್ಚು ಒಲವು ನೀಡುತ್ತದೆ. ಹಳ್ಳಿ ಜನರಿಗೆ ಸ್ವಚ್ಛತೆ ಪರಿಕಲ್ಪನೆ ಮೂಡಿಸುತ್ತದೆ. ಹೊಂದಾಣಿಕೆ ಮನೋಭಾವ, ಭಾಷಣ ಕಲೆ, ನಿರೂಪಣೆ, ಸಮಯ ಪಾಲನೆ ರೂಪಿಸುತ್ತದೆ ಎಂದರು.
ಶಾಲೆ ಮುಖ್ಯ ಶಿಕ್ಷಕ ಅಂಕಮಾದೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯ, ಸೇವಾ ಮನೋಭಾವ ಬೆಳೆಸುವಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ರವಹಿಸುತ್ತದೆ. ಈ ಯೋಜನೆಯು ಯುವಕ-ಯುವತಿಯರಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ. ಸಾಮಾಜಿಕ ಜೀವನದ ಪರಿಚಯ ಮಾಡಿಕೊಡುತ್ತದೆ ಎಂದರು.
ಉದ್ಯಮಿ ಎಲ್.ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ವಿಸ್ತರಣಾಧಿಕಾರಿ ಮಹೇಶ್.ಎಸ್.ಎಲ್, ಶಾಂತಲಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತರಾವ್, ಕಮ್ಮವಾರಿ ಸಂಘದ ಖಜಾಂಚಿ ಡಿ.ರುಕ್ಮಾಂಗದ ಮಾತನಾಡಿದರು.
ಶಾಂತಲಾ ತಂಡದವರು ಮತ್ತು ಶಿಬಿರದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಂಭುಲಿಂಗೇಶ್ವರ ವಿದ್ಯಾಸಂಸ್ಥೆ ಕೋಶಾಧ್ಯಕ್ಷ ಕರಿಯಪ್ಪ, ಎನ್ಎಸ್ಎಸ್ ಅಧಿಕಾರಿ ಚೌಡಪ್ಪ ಎಂ.ಆರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಗಳಮ್ಮ ಶಿವರಾಜು, ಶಾಲೆ ಶಿಕ್ಷಕ ಹಾಗೂ ಸಿಬ್ಬಂದಿ ಇದ್ದರು.