ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಣಿ ಮಳೆ-ರೈತರಿಗೆ ನಿರಾಶೆ

Last Updated 13 ಮೇ 2019, 13:50 IST
ಅಕ್ಷರ ಗಾತ್ರ

ವಿಜಯಪುರ: ಭರಣಿ ಮಳೆ ಬಿದ್ದರೆ ಧರಣಿಯೆಲ್ಲಾ ಬೆಳೆ ಎಂಬುದು ರೈತರ ನಂಬಿಕೆ.ಭರಣಿ ಮಳೆ ಬೀಳುವ ಪ್ರಮಾಣದಲ್ಲಿ ಬೆಳೆಗಳನ್ನು ನಿರ್ಧರಿಸುವ ರೈತರ ಮೊಗದಲ್ಲಿ ನಿರಾಶೆಯ ಕಾರ್ಮೋಡ ಕವಿಯುತ್ತಿದೆ.

ಮುಂಗಾರಿನ ಹಂಗಾಮಿನಲ್ಲಿ ರೈತರಲ್ಲಿ ಭರಪೂರ ಆಶಾಭಾವನೆ ಮೂಡಿಸುತ್ತಿದ್ದ ಭರಣಿ ಮಳೆ ಈ ವರ್ಷ ನಿರಾಸೆಗೊಳಿಸಿದೆ. ಸತತವಾಗಿ 6 ವರ್ಷಗಳಿಂದ ಬರಗಾಲಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಮಳೆಗಾಗಿ ರೈತರು ಚಾತಕಪಕ್ಷಿಗಳಂತೆ ಎದುರು ನೋಡುತ್ತಿರುವ ಸಂದರ್ಭದಲ್ಲಿ ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಆತಂಕಕ್ಕೆ ಒಳಗಾಗಲು ಕಾರಣವಾಗಿದೆ ಎಂದು ರೈತ ನಂಜುಂಡಪ್ಪ ಹೇಳುತ್ತಾರೆ.

ಭರಣಿ ಮಳೆ ಅಲ್ಲಲ್ಲಿ ತುಂತುರು ಮಳೆಯ ಹನಿಗಳನ್ನು ಸುರಿಸಲಿಕ್ಕಷ್ಟೇ ಸೀಮಿತವಾಗಿ ಈಗ ಕೃತ್ತಿಕಾ ಮಳೆ ವೇಳೆ ಭೂಮಿ ಹದಗೊಳಿಸುವುದು ವಾಡಿಕೆ. ಆದರೆ, ಬಿತ್ತನೆ ಆರಂಭವಾಗುವುದಕ್ಕೂ ಮುನ್ನ ಮಳೆಯಾಗದ ಕಾರಣ ಇದುವರೆಗೂ ಸಿದ್ಧತೆಗಳು ನಡೆದಿಲ್ಲ. ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆ ಆರಂಭಿಸಲು ಇನ್ನೂ 15 ದಿನ ಸಮಯಾವಕಾಶವಿದೆ. ಭೂಮಿಯನ್ನು ಹದಗೊಳಿಸುವ ಕಾರ್ಯ ಅರ್ಧ ಭಾಗದಷ್ಟೂ ಆಗಿಲ್ಲ. ಈ ಬಾರಿಯೂ ಬೆಳೆಗಳು ಕುಂಠಿತಗೊಳ್ಳಬಹುದೆಂಬ ಆತಂಕ ಈಗಿನಿಂದಲೇ ಕಾಡಲಾರಂಭಿಸಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸುತ್ತಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣದಿಂದಾಗಿ ಆಹಾರ ಪದಾರ್ಥಗಳು ಉತ್ಪಾದನೆಗೊಳ್ಳದೆ ಹೋದರೆ ಈ ವರ್ಷವೂ ಗಂಭೀರವಾದ ಸಮಸ್ಯೆಗಳನ್ನು ಎದುರುಗೊಳ್ಳಬೇಕಾಗುತ್ತದೆ ಎನ್ನುವ ಆತಂಕ ಕೃಷಿ ಇಲಾಖೆಯನ್ನೂ ಕಾಡಲಾರಂಭಿಸಿದೆ. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಕಿಟ್‌ಗಳನ್ನು ವಿತರಣೆ ಮಾಡಿದರೂ ಮಳೆಯಿಲ್ಲದ ಕಾರಣ ಮೇವಿನ ಕೊರತೆಯನ್ನೂ ಅನುಭವಿಸಬೇಕಾಗಿದೆ ಎಂಬ ಅಳಲು ರೈತ ಹನುಮಂತರಾಯಪ್ಪ ಅವರದು.

ಕಳೆದ ವರ್ಷ ಮೇ ತಿಂಗಳಿನಲ್ಲಿ 92.1 ಎಂ.ಎಂ. ಮಳೆಯಾಗಿತ್ತು. ಆದರೆ, ಈ ಬಾರಿ ಮೇ ತಿಂಗಳು ಆರಂಭಗೊಂಡು ಎರಡು ವಾರಗಳು ಕಳೆಯುತ್ತಿದ್ದು ಕೇವಲ 6.1 ಎಂ.ಎಂ.ನಷ್ಟು ಮಾತ್ರ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT