ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಣದ ದೇವನಹಳ್ಳಿ ತಾಲ್ಲೂಕು ಕಚೇರಿ ಆವರಣ

Last Updated 25 ಆಗಸ್ಟ್ 2018, 14:08 IST
ಅಕ್ಷರ ಗಾತ್ರ

ದೇವನಹಳ್ಳಿ: ಸಮೃದ್ಧವಾಗಿ ಬೆಳೆದಿರುವ ವಿವಿಧ ಜಾತಿ ಮರಗಳ ನಡುವೆ ಗಿಡಗಂಟಿಗಳ ದಟ್ಟಣೆ. ಕಚೇರಿ ಹೊರಭಾಗ ಮತ್ತು ಒಳಭಾಗದಲ್ಲಿ ದುರ್ವಾಸನೆಯ ಕಮಟು. ಇದು ತಾಲ್ಲೂಕು ಆಡಳಿತ ಕಚೇರಿಯ ಸದ್ಯದ ಪರಿಸ್ಥಿತಿ.

ಮರಗಳ ನಡುವೆ ಬೆಳೆದಿರುವ ಇತರೆ ಜಾತಿ ಗಿಡಗಳನ್ನು ಹೊರಹಾಕಿ, ಮರದ ಬುಡಗಳ ಸುತ್ತ ಮಣ್ಣಿನಿಂದ ಎತ್ತರಿಸಿದರೆ ಮಳೆ ನೀರು ನಿಂತು ಮರ ಮತ್ತಷ್ಟು ಉತ್ತಮವಾಗಿ ಬೆಳೆಯಲು ಸಹಕಾರವಾಗುತ್ತಿತ್ತು. ಅಧಿಕಾರಿಗಳು ಬರುತ್ತಾರೆ, ಅವರ ಪಾಡಿಗೆ ಹೋಗುತ್ತಾರೆ. ಮರಗಿಡಗಳ ಬಗ್ಗೆ ಯಾರು ಜವಬ್ದಾರಿ ವಹಿಸುತ್ತಾರೆ ಎಂಬುದು ಸ್ಥಳೀಯ ನಿವಾಸಿ ರಾಜಣ್ಣ ಆರೋಪ.

ತಾಲ್ಲೂಕು ಆಡಳಿತ ಕಚೇರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಿಸಬೇಕಾಗಿತ್ತು. ಕಚೇರಿ ಒಳಭಾಗದಲ್ಲಿರುವ ಶೌಚಾಲಯ ಪ್ರತಿನಿತ್ಯ ದುರ್ವಾಸನೆ ಬೀರುತ್ತಿದೆ. ಇದರ ಜತೆಗೆ ಕಟ್ಟಡಕ್ಕೆ ಹೊಂದಿಕೊಂಡ ಗೋಡೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಕಚೇರಿ ಸಿಬ್ಬಂದಿಗೂ ಹಾಗೂ ಸಾರ್ವಜನಿಕರಿಗೆ ಕಿರಿಯಾಗುತ್ತಿದೆ ಎನ್ನುತ್ತಾರೆ ವೆಂಕಟೇಶ್.

ಇಡೀ ದೇಶ ಸ್ವಚ್ಛ ಭಾರತ್‌ ಮಿಷನ್ ಪಾಲನೆ ಮಾಡಲೇಬೇಕು ಎಂದು ಪ್ರಧಾನಿ ಕಡ್ಡಾಯ ಮಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಬಯಲು ಶೌಚಮುಕ್ತ ಆಗಿಸಲು ಹರಸಾಹಸ ಪಡುತ್ತಿವೆ. ಪುರಸಭೆ ಮತ್ತು ನಗರಸಭೆಯೂ ಹೊರತಲ್ಲ. ಗಿಡಗಂಟಿ ಬೆಳೆದಿರುವುದರಿಂದ ದುರ್ವಾಸನೆ ಜತೆಗೆ ಸೊಳ್ಳೆಗಳ ವಿಪರೀತ ಹಾವಳಿ. ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖೇಶ್ ಒತ್ತಾಯಿಸಿದರು.

ಹಿಂದಿನ ತಹಶೀಲ್ದಾರ್‌ ಅವರ ಪರಿಸರ ಕಾಳಜಿ: ತಾಲ್ಲೂಕು ಆಡಳಿತ ಕಚೇರಿ ಉದ್ಘಾಟನೆಗೊಂಡು ಎಂಟು ವರ್ಷ ಕಳೆದಿದೆ. ಆಗಿನ ತಹಶೀಲ್ದಾರ್‌ ಅವರ ಪರಿಸರ ಕಾಳಜಿಯಿಂದಾಗಿ 280 ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಸತತ ಮೂರು ವರ್ಷ ಬರಗಾಲದ ನಡುವೆಯೂ ನೀರುಣಿಸಿದ ಪರಿಣಾಮ ಮರಗಳು ಬೆಳೆದು ಕಾಡಿನಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT