ಬೆಳಗಾವಿ: ಭಗವದ್ಗೀತೆ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾಹಿತಿ ಇಲ್ಲದಿರುವುದು ತಿಳಿದುಬಂದಿದೆ.
ಜಿಲ್ಲೆಯ ರಾಯಬಾಗದ ವಕೀಲ ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಕೇಳಿದ್ದ ಮಾಹಿತಿಗೆ ಕೇಂದ್ರ ಸರ್ಕಾರವು ನೀಡಿರುವ ಉತ್ತರ ಅಚ್ಚರಿಗೆ ಕಾರಣವಾಗಿದೆ. ‘ಭಗವದ್ಗೀತೆ ಮೂಲ ಪುಸ್ತಕದ ಪ್ರತಿ ಎಲ್ಲಿದೆ? ಮಾನ್ಯತೆ ಪಡೆದ ಅಧಿಕೃತ ಪುಸ್ತಕ, ಪ್ರಕಾಶಕರ ಪಟ್ಟಿ ಬಗ್ಗೆ ಮಾಹಿತಿ ಕೊಡಬೇಕು’ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದೆ. ‘ಆ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲ’ ಎಂದು ಇಲಾಖೆಯಿಂದ ಉತ್ತರ ಬಂದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪವಿತ್ರಗ್ರಂಥ ಭಗವದ್ಗೀತೆ ವಿಷಯವನ್ನು ಪಠ್ಯದಲ್ಲಿ ಅಳವಡಿಕೆ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ, ಭಗವದ್ಗೀತೆ ಮೂಲ ಪ್ರತಿ, ಪ್ರಕಾಶಕರ ಪಟ್ಟಿ ನೀಡಬೇಕು. ಮಕ್ಕಳಿಗೆ ಕಲಿಸಲು ಮುಂದಾಗಿರುವ ಭಗವದ್ಗೀತೆ ಯಾವುದು? ಸಂಸ್ಕೃತದಲ್ಲಿದ್ದ ಭಗವದ್ಗೀತೆ ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗೆ ಅಧಿಕೃತವಾಗಿ ಭಾಷಾಂತರ ಮಾಡಿದವರು ಯಾರು? ಈ ಬಗ್ಗೆ ಕೇಂದ್ರ ಸರ್ಕಾರದ ಬಳಿಯೇ ಮಾಹಿತಿ ಇಲ್ಲ’ ಎಂದು ಹೇಳಿದರು.
‘ಭಗವದ್ಗೀತೆ ಮೂಲ ಭಾಷೆ ಸಂಸ್ಕೃತದಲ್ಲಿತ್ತು ಎಂದು ಹೇಳುತ್ತಾರೆ. ಮೂಲ ಗ್ರಂಥ ಮತ್ತು ಅಧಿಕೃತವಾಗಿ ಭಾಷಾಂತರ ಮಾಡಿದವರು ಯಾರು ಎನ್ನುವುದನ್ನು ತಿಳಿಸದಿದ್ದರೆ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ಹೋಗುತ್ತದೆ. ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.