ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ: ರಸ್ತೆ ತಡೆ, ಟೈರ್ ಸುಟ್ಟು ಆಕ್ರೋಶ

ನಾಡಧ್ವಜ ಹಿಡಿದು ಕುಣಿದ ವಿದ್ಯಾರ್ಥಿಯನ್ನು ಠಾಣೆಗೆ ಕರೆಯಿಸಿ ಹೊಡೆದ ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹ
Last Updated 1 ಡಿಸೆಂಬರ್ 2022, 8:40 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗೋಗಟೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಹಬ್ಬದಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಯ ಮೇಲೆ ಸಹಪಾಠಿಗಳು ಹಲ್ಲೆ ಮಾಡಿದ ಘಟನೆ ಖಂಡಿಸಿ, ಕರವೇ ವಿವಿಧ ಬಳಗದ ಕಾರ್ಯಕರ್ತರು ಕಾಲೇಜು ಸಮೀಪದ ಆರ್.ಪಿ.ಡಿ ವೃತ್ತದಲ್ಲಿ ಗುರುವಾರ ರಸ್ತೆ ತಡೆ ನಡೆಸಿದರು.

ಮೂರು ತಾಸಿಗೂ ಹೆಚ್ಚು ಸಮಯ ವೃತ್ತದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು ಗೋಗಟೆ ಕಾಲೇಜು, ರಾಜ್ಯ ಸರ್ಕಾರ, ಪೊಲೀಸರು, ಸ್ಥಳೀಯ ರಾಜಕಾರಣಿಗಳು ಹಾಗೂ ಎಂಇಎಸ್ ವಿರುದ್ಧ ಘೋಷಣೆ ಮೊಳಗಿಸಿದರು.

ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗೋವಾ, ಖಾನಾಪುರ ಮಾರ್ಗದ ವಾಹನಗಳನ್ನು ತಡೆದರು. ಇದರಿಂದ ವಾಹನಗಳನ್ನು ರಾಣಿ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತದಿಂದಲೇ ಮಾರ್ಗ ಬದಲಿಸಲಾಯಿತು. ಹಲವು ವಾಹನಗಳು ಆರ್.ಪಿ.ಡಿ ವೃತ್ತದ ಸುತ್ತ ಸಾಲಾಗಿ ನಿಲ್ಲಬೇಕಾಯಿತು.

'ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಅವನನ್ನು ಠಾಣೆಗೆ ಕರೆಯಿಸಿ ಹೊಡೆದಿದ್ದಾರೆ, ಬೂಟುಗಾಲಿನಿಂದ ಒದ್ದಿದ್ದಾರೆ. ಕನ್ನಡ ಧ್ವಜಕ್ಕೂ ಅವಮಾನಕರ ಪದ ಬಳಸಿ ಬೈದಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯೇ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯನ್ನು ಠಾಣೆಗೆ ಕರೆಯಿಸಿ ಹೆದರಿಸಿದ ಸಂದರ್ಭದ ಸಿಸಿಟಿವಿ ತುಣುಕು ಪರಿಶೀಲಿಸಬೇಕು. ಕೂಡವೇ ಆ ಪೊಲೀಸ್ ಅಧಿಕಾರಿ ಮೇಲೆ ಕ್ರಮ ವಹಿಸಬೇಕು' ಎಂದು ಮುಖಂಡರು ಆಗ್ರಹಿಸಿದರು.

ಕನ್ನಡ ತಾಯಿ ಭುವನೇಶ್ವರಿಯ ಮಕ್ಕಳಿಗೆ ಕರ್ನಾಟಕದಲ್ಲಿಯೇ ರಕ್ಷಣೆ ಇಲ್ಲವಾಗಿದೆ. ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುವುದರಲ್ಲಿ ತಪ್ಪೇನಿದೆ? ಈ ನಾಡಿನ ಧ್ವಜವನ್ನು ಎಲ್ಲ ಕಾಲೇಜಿನಲ್ಲಿ, ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಇದನ್ನು ಸಹಿಸದ ಮರಾಠಿ ಹುಡುಗರ ಮೇಲೆ ಕ್ರಮ ಕೈಗೊಳ್ಳಬೇಕು, ಹಲ್ಲೆಕೋರರನ್ನು ಕಾಲೇಜಿನಿಂದ ಹೊರಹಾಕಬೇಕು, ಅವರಿಗೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಬಾರದು, ಹುಡುಗರು ಅಪ್ರಾಪ್ತರಾಗಿದ್ದರೆ ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಎಂದು ಪ್ರಕರಣ ದಾಖಲಿಸಬೇಕು' ಎಂದೂ ಆಗ್ರಹಿಸಿದರು.

ಗಡಿ ವಿಚಾರವಾಗಿ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ನಮ್ಮ ರಾಜಕಾರಣಿಗಳು, ಜನಪ್ರತಿನಿಧಿಗಳು ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಮರಾಠಿಗರ ಮತಗಳ ಲಾಲಸೆಯ ಕಾರಣ ಶಾಸಕರು, ಸಂಸದರು ಕೂಡ ಮೌನವಾಗಿದ್ದು, ನಾಡಿಗೆ ಮಾಡಿದ ದ್ರೋಹ ಎಂದೂ ಕಿಡಿ ಕಾರಿದರು.

ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಗುಡಗನಟ್ಟಿ, ಸುರೇಶ ಗವನ್ನವರ, ಸುಧೀರ ರೋಖಡೆ, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಕೃಷ್ಣೇಗಮಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಗೌಡ ಪಾಟೀಲ, ಉಪಾಧ್ಯಕ್ಷ ರಾಜು ಯರಗಾಣಿಹಲವರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT