ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನಕ್ಕೆ ಗೈರು, ಸಹಿ ಮಾಡಿ ಜಾಗ ಖಾಲಿ ಮಾಡಿದ ಶಾಸಕರು: ಸಭಾಧ್ಯಕ್ಷ ಕಾಗೇರಿ ಬೇಸರ

ಶೇ 74ರಷ್ಟು ಮಾತ್ರ ಹಾಜರಾತಿ
Last Updated 30 ಡಿಸೆಂಬರ್ 2022, 12:33 IST
ಅಕ್ಷರ ಗಾತ್ರ

ಬೆಳಗಾವಿ: ‘ಚಳಿಗಾಲದ ಅಧಿವೇಶನದಲ್ಲಿ ಶೇ 74ರಷ್ಟು ಮಾತ್ರ ಹಾಜರಾತಿ ಕಂಡುಬಂದಿದೆ. ಪೂರ್ಣ ಹಾಜರಾತಿ ಕಡ್ಡಾಯವೆಂದು ನಾನು ಹೇಳಿದ್ದೆ. ಆದರೂ ಕೆಲವರು ಬೇಜವಾಬ್ದಾರಿ ತೋರಿ ಸದನದಿಂದ ದೂರ ಉಳಿದಿದ್ದಾರೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದವರು ತಾವು ಎಂಬುದನ್ನು, ಗೈರಾದವರು ಅರ್ಥ ಮಾಡಿಕೊಳ್ಳವೇಕು’ ಎಂದು ಅವರು ನಗರದಲ್ಲಿ ಶುಕ್ರವಾರ ಮಾಧ್ಯಮದವರ ಮುಂದೆ ಹೇಳಿದರು.

‘ದಿನೇಶ ಗುಂಡೂರಾವ್‌, ಡಿ.ಸಿ.ಗೌರಿಶಂಕರ, ಹರೀಶ್‌ ಪೂಂಜಾ, ಎಂ.ಕೃಷ್ಣಪ್ಪ, ಶರತ್‌ಕುಮಾರ್, ಬಚ್ಚೇಗೌಡ, ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಜಮೀರ್‌ ಅಹಮದ್‌ ಖಾನ್‌ ಹಾಗೂ ಅನಿತಾ ಕುಮಾರಸ್ವಾಮಿ ಅವರು ಅನುಮತಿ ಪಡೆಯದೇ ಗೈರಾಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಎ.ಎಸ್‌.ರಾಮದಾಸ, ರವೀಂದ್ರನಾಥ, ಡಿ.ಸಿ. ತಮ್ಮಣ್ಣ ಅನುಮತಿ ಪಡೆದು ಗೈರಾಗಿದ್ದಾರೆ’ ಎಂದು ವಿವರಿಸಿದರು.

‘ಜನರು ಸದನದಲ್ಲಿ ಬರಲಾಗುವುದಿಲ್ಲ ಎಂದು ಪ್ರತಿನಿಧಿಗಳನ್ನು ಕಳುಹಿಸುತ್ತಾರೆ. ಪ್ರತಿನಿಧಿಗಳೇ ಬರದಿದ್ದರೆ ಜನರ ಸಮಸ್ಯೆ ಇನ್ಯಾರು ಚರ್ಚಿಸಬೇಕು? ಶಾಸಕರು ತಮ್ಮ ಸ್ಥಾನದ ಮಹತ್ವ ಅರಿಯಬೇಕು. ಜನರು ಕೂಡ ಜಾಗೃತರಾಗಬೇಕು. ತಮ್ಮೂರಿನ ಜಾತ್ರೆಗೋ, ಹಬ್ಬಕ್ಕೋ ಕರೆಯಲು ದುಂಬಾಲು ಬೀಳುವ ಬದಲು ಸದನಕ್ಕೆ ಹೋಗಿ ಎಂದು ಎಚ್ಚರಿಸಬೇಕು’ ಎಂದೂ ಅವರು ಸಲಹೆ ನೀಡಿದರು.

ದಾಖಲೆಯ ಭೇಟಿ: ‘9 ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಕಲಾಪ ವೀಕ್ಷಿಸಿದರು. ಇವರಲ್ಲಿ ಶಾಲಾ– ಕಾಲೇಜು ಮಕ್ಕಳೇ ಹೆಚ್ಚಾಗಿದ್ದು ವಿಶೇಷ. 80 ಬೃಹತ್‌ ಪ್ರತಿಭಟನೆಗಳು, 20 ಮನವಿಗಳು ಸೇರಿ 100 ಹೋರಾಟಗಳು ಎದುರಾಗಿವೆ. ಸಂಬಂಧಿಸಿದವರು ಸೂಕ್ತವಾಗಿ ಸ್ಪಂದಿಸಿದ್ದಾರೆ’ ಎಂದರು.

‘ಅಧಿವೇಶನ ವೇಳೆಯಲ್ಲಿ 40 ಶಾಸಕರು ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆದಿದ್ದಾರೆ. ಇನ್ನುಳಿದವರು ಮುಂಚೆಯೇ ಪಡೆದಿದ್ದಾರೆ. ಅಧಿಕಾರಿಗಳು– ಸಿಬ್ಬಂದಿ ಸೇರಿ 700 ಮಂದಿಗೆ ಈ ಲಸಿಕೆ ನೀಡಲಾಗಿದೆ’ ಎಂದು ವಿವರಿಸಿದರು.

‘ಉತ್ತರ ಕರ್ನಾಟಕದ ನಿರ್ಲಕ್ಷ್ಯ’
‘ಸದನದ ಕೊನೆಯ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಆದ್ಯತೆ ನೀಡಲಾಗಿತ್ತು. ಆದರೆ, ಸದನದಲ್ಲಿ ಸದಸ್ಯರಿಲ್ಲದ ಕಾರಣ ಚರ್ಚೆ ಯಶಸ್ವಿ ಆಗಲಿಲ್ಲ’ ಎಂದೂ ಸ್ಪೀಕರ್‌ ಬೇಸರ ವ್ಯಕ್ತಪಡಿಸಿದರು.

‘ಈ ಬಾರಿ 41 ಗಂಟೆ 21 ನಿಮಿಷ ಅಧಿವೇಶನ ನಡೆದಿದೆ. 13 ಮಸೂದೆ ಮಂಡಿಸಿದ್ದೇವೆ. 9 ವಿಧೇಯಕ ಅಂಗೀಕರಿಸಿದ್ದೇವೆ. 150 ಪ್ರಶ್ನೆಗಳ ಪೈಕಿ 146ಕ್ಕೆ ಉತ್ತರಿಸಿದ್ದೇವೆ’ ಎಂದರು.

‘ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೇ ಆದ್ಯತೆ ನೀಡಬೇಕು ಎಂಬುದು ಜನರ ಆಗ್ರಹ. ನನ್ನ ಆಶಯವೂ ಇದೇ ಆಗಿದೆ. ಮುಂದಿನ ಅಧಿವೇಶನಗಳಲ್ಲಿ ಮೊದಲು ಈ ಭಾಗದ ವಿಷಯಗಳನ್ನೇ ಎತ್ತಿಕೊಳ್ಳಲು ಆದ್ಯತೆ ನೀಡಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT