ಗ್ರಾಮ ಪಂಚಾಯ್ತಿ ವ್ಯವಸ್ಥೆ ಇದ್ದಾಗ ಕಡುಬಡವರಿಗೆ ಈ ಹೊಸ ಬಡಾವಣೆ ನಿರ್ಮಿಸಿ ಕೊಡಲಾಯಿತು. ಮನೆ ನಿರ್ಮಾಣಕ್ಕಷ್ಟೇ ಪಂಚಾಯ್ತಿ ಸೀಮಿತವಾಯಿತು. ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪೂರೈಕೆ ಜಾಲ, ರಸ್ತೆ, ಚರಂಡಿ ನಿರ್ಮಾಣ ಮಾಡುವ ಗೋಜಿಗೆ ಹೋಗಲಿಲ್ಲ. ಮನೆ ನಿರ್ಮಾಣಗೊಂಡರೂ ಅಗತ್ಯ ಸೌಲಭ್ಯಗಳು ಇಲ್ಲದ್ದರಿಂದ ಕುಟುಂಬಗಳು ವಾಸಿಸಲು ಹಿಂದೇಟು ಹಾಕಿದವು. ಕಟ್ಟಿದ ಮನೆಗಳು ನಿರ್ವಹಣೆ ಇಲ್ಲದೆ ಚಾವಣಿಗಳು ಕಿತ್ತು ಹೋದವು. ಅವುಗಳನ್ನು ಅನೇಕರು ತಿರುಗಿಯೂ ನೋಡಲಿಲ್ಲ. ವಾಸಿಸಬೇಕಾದ ಮನೆಯಲ್ಲಿ ಆಳೆತ್ತರದ ಕಸಗಂಟಿಗಳು ಬೆಳೆದು ನಿಂತವು ಎಂದು ಜನರು ಮಾಹಿತಿ ನೀಡಿದರು.