ಬೈಲಹೊಂಗಲ (ಬೆಳಗಾವಿ ಜಿಲ್ಲೆ): 'ಆಸ್ತಿ ವಿವಾದದ ಕಾರಣ ಉಂಟಾದ ಹಲವು ವರ್ಷಗಳ ಹಿಂದಿನ ದ್ವೇಷವೇ ನನ್ನ ಮೇಲೆ ಗುಂಡಿನ ದಾಳಿ ನಡೆಯಲು ಕಾರಣ. ನನ್ನ ಸಹೋದರನ ಕುಮ್ಮಕ್ಕಿನಿಂದ ದೂರದ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ' ಎಂದು ಉದ್ಯಮಿ, ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ತಿಳಿಸಿದರು.
ಮಂಗಳವಾರ ರಾತ್ರಿ ಅವರ ಮೇಲೆ ಗುಂಡಿನ ದಾಳಿ ನಡೆದ ಬಗ್ಗೆ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
'ನನ್ನ ಮೇಲೆ ಐದು ಸುತ್ತು ಗುಂಡು ಹಾರಿಸಲಾಯಿತು. ಅತ್ತಿತ್ತ ಓಡಾಡಿ ನಾನು ತಪ್ಪಿಸಿಕೊಂಡೆ. ಹೀಗಾಗಿ ಗುಂಡು ತಗಲಿಲ್ಲ. ಪಟ್ಟಣದ ಇಂಚಲ ರಸ್ತೆಯ ನಮ್ಮ ನಿವಾಸದ ಮುಂದೆ ಬೈಕ್ ಮೇಲೆ ಬಂದ ಆರೋಪಿಗಳು ಗುಂಡು ಹಾರಿಸಿ ಪರಾರಿಯಾದರು. ನನ್ನ ಸಹೋದರ ಸಂಬಂಧಿ ಇದರಲ್ಲಿ ಇರುವ ಬಗ್ಗೆ ಎಫ್.ಐ.ಆರ್. ಮಾಡಿಸಿದ್ದೇನೆ' ಎಂದರು.
'ಇಂಥದ್ದೇ ಕಾರಣಕ್ಕೆ ಕೊಲೆ ಮಾಡಲು ಮುಂದಾಗಿದ್ದಾರೆ ಎಂದು ನನಗೂ ಖಚಿತವಾಗಿ ಗೊತ್ತಾಗಿಲ್ಲ. ನಾನು ಯಾರಿಗೂ ಕೇಡು ಬಯಸಿಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯಿರಿ ಎಂದು ಅವರಿಗೂ ಸಾಕಷ್ಟು ಬಾರಿ ತಿಳಿಸಿದ್ದೇನೆ. ಹತಾಷರಾಗಿ ನನ್ನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ನೈಜ ಕಾರಣ ಪೊಲೀಸರ ತನಿಖೆಯಿಂದ ಗೊತ್ತಾಗಲಿದೆ' ಎಂದರು.
ಒಬ್ಬ ಆರೋಪಿ ಬಂಧನ:ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ತಡರಾತ್ರಿ ಆರೋಪಿ ಮಹೇಶ ನಾವಲಗಟ್ಟಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವ್ಯಕ್ತಿ ಶಿವರಂಜನ್ ಅವರ ಹಿರಿಯ ಸಹೋದರನ ಪತ್ನಿಯ ಅಕ್ಕನ ಮಗ (ಶಿವರಂಜನ್ ಅವರ ದೂರದ ನಂಟ). ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್. ಸಾತೇನಹಳ್ಳಿ, ಪಿಎಸ್ಐ ಪ್ರವೀಣ ಕೋಟಿ, ಪಟ್ಟಣದ ಪೊಲೀಸ್ ಅಧಿಕಾರಿಗಳು, ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಙರು ಬಂದು ಮಹಜರು ನಡೆಸಿದರು.