ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿ.ಸುರೇಶ ಅಂಗಡಿ ಅವರ ಕುಟುಂಬದವರಿಗೆ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವುದಕ್ಕಾಗಿ ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ಜಿಲ್ಲೆಯ ಚಿಕ್ಕೋಡಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ನಮ್ಮ ಹೈಕಮಾಂಡ್ ಅದೇನು ಕ್ರಮ ತೆಗೆದುಕೊಳ್ಳುತ್ತದೆಯೋ ತೆಗೆದುಕೊಳ್ಳಲಿ. ನನಗೇನೂ ಅಭ್ಯಂತರವಿಲ್ಲ’ ಎಂದು ಸವಾಲು ಹಾಕಿದರು.
‘ಸುರೇಶ ಅಂಗಡಿ ಕುಟುಂಬದವರು ಸ್ಪರ್ಧಿಸಿದರೆ ಪಕ್ಷ ನೋಡುವುದಿಲ್ಲ. ನನ್ನ ಮಗನ ಚುನಾವಣೆ ಹೇಗೆ ಮಾಡಿದ್ದೇನೆಯೋ ಅದೇ ರೀತಿ ಅವರಿಗೂ ನೆರವಾಗುತ್ತೇನೆ’ ಎಂದರು.
‘ಪಕ್ಷ ಬೇರೆ ಬೇರೆಯಾಗಿದ್ದರೂ ನಾನು ಮತ್ತು ಸುರೇಶ ಅಂಗಡಿ ಆತ್ಮೀಯ ಸ್ನೇಹಿತರಾಗಿದ್ದೆವು. ಅವರು ನಮ್ಮೊಂದಿಗೆ ಇಲ್ಲದಿರುವುದು ದುಃಖದ ಸಂಗತಿ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.