ತೆಲಸಂಗ: ‘ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಒಂದು ಹೂವು ಕೊಟ್ಟರೆ ಸಾಕು. ಸ್ಮರಣಿಕೆ, ಶಾಲು ಮೊದಲಾದವುಗಳಿಗೆ ಖರ್ಚು ಮಾಡುವ ಬದಲು ಹಣವನ್ನು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅಥವಾ ಇನ್ನಾವುದೋ ಸತ್ಕಾರ್ಯಕ್ಕೆ ಬಳಸಿದರೆ ಉಪಯೋಗವಾಗುತ್ತದೆ’ ಎಂದು ಇಲ್ಲಿನ ಹಿರೇಮಠದ ವೀರೇಶ್ವರ ದೇವರು ಕಿವಿಮಾತು ಹೇಳಿದರು.
ಗ್ರಾಮದ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಗೆಳೆಯರ ಬಳಗದ ವತಿಯಿಂದ ಹುತಾತ್ಮ ಯೋಧ ಶ್ರೀಕಾಂತ ಖೋಬ್ರಿ ಹಾಗೂ ಹುತಾತ್ಮ ಕಾನ್ಸ್ಟೆಬಲ್ ಸುರೇಶ ಡೆಂಗಿ ಅವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮದ ಮೇಲೆ ಬಹಳಷ್ಟು ಪ್ರೀತಿ–ವಿಶ್ವಾಸ ಹೊಂದಿದ್ದ ಇಬ್ಬರು ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಇಲ್ಲಿನ ಯುವಕರು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಾಗಲು ಪ್ರಯತ್ನಿಸಬೇಕು. ಸೋಲು ಯಾರಿಗೂ ಶಾಶ್ವತವಲ್ಲ. ಸೋತರೂ ಗೆದ್ದೇ ಗೆಲ್ಲುವೆ ಎಂಬ ಛಲದಿಂದ ಪ್ರಯತ್ನಿಸಬೇಕು. ಯಶಸ್ವಿ ವ್ಯಕ್ತಿಯಾಗಲು ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು’ ಎಂದರು.
ಡಾ.ಬಿ.ಎಸ್. ಕಾಮನ್ ಮಾತನಾಡಿದರು. ನಿವೃತ್ತ ಸೈನಿಕರಾದ ಆನಂದ ಸನಗೊಂಡ, ಮಾಳು ಸವನೂರ, ಅನೀಲ ಹಡಪದ, ಪಿಂಟು ಮೋರೆ ಮತ್ತು ಮಹಾದೇವ ಸಕ್ರಿ ಅವರನ್ನು ಸತ್ಕರಿಸಲಾಯಿತು.