ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಹತ್ತು ದಿನಗಳ ವಚನ ಗಾಯನ ಶಿಬಿರದ ಸಮಾರೋಪ ಸಮಾರಂಭವು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂಗೀತ ವಿದ್ವಾಂಸ ಪ್ರೊ.ವಿಜಯಕುಮಾರ ತೇಲಿ, ‘ಗಾಯನ ವಿದ್ಯೆಯು ಲೇಸು ಎನ್ನುವ ಸರ್ವಜ್ಞನ ಮಾತಿನಂತೆ ಕಲೆಗಳಲ್ಲಿ ಸಂಗೀತಕ್ಕೆ ಶ್ರೇಷ್ಠವಾದ ಸ್ಥಾನವಿದೆ. ಅದಕ್ಕೆ ಮಳೆ ತರಿಸುವ, ಮನ ತಣಿಸುವ, ನೋವು ಮರೆಸುವ, ಭಾವಗಳನ್ನರಳಿಸುವ ಶಕ್ತಿ ಇದೆ. ವಚನಗಳನ್ನು ಸರಿಯಾದ ಸ್ವರ ತಾಳ ಲಯ ಮತ್ತು ಅರ್ಥಗ್ರಹಿಕೆಯೊಂದಿಗೆ ಹಾಡಿದರೆ ಅವಿರಳ ಆನಂದ ಸಿಗುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಮಹಿಳೆಯರಿಗೆ ಕಲೆ, ಸಾಹಿತ್ಯದ ಸಂಸ್ಕಾರ ನೀಡಿದರೆ ಮನುಕುಲಕ್ಕೆ ನೀಡಿದಂತೆಯೇ. ಅದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತದೆ. ಈ ನಿಟ್ಟಿನಲ್ಲಿ ಮಹಾಸಭಾ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ’ ಎಂದರು.
ಪಾಲ್ಗೊಂಡಿದ್ದ 45 ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.