ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನೈತಿಕ ಸಂಬಂಧ ಶಂಕೆ | ಮನೆ ಬಿಟ್ಟು ಹೋದ ಮಹಿಳೆ– ಪುರುಷ: ಮನೆ ಧ್ವಂಸ

Published 7 ಫೆಬ್ರುವರಿ 2024, 14:18 IST
Last Updated 7 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಯಮಕನಮರಡಿ (ಬೆಳಗಾವಿ ಜಿಲ್ಲೆ): ಅನೈತಿಕ ಸಂಬಂಧ ಶಂಕೆಯಿಂದ ಸಮೀಪದ ಜಿನರಾಳ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಮನೆ ಧ್ವಂಸ ಮಾಡಲಾಗಿದೆ. ಈ ಬಗ್ಗೆ 27 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಜಿನರಾಳ ಗ್ರಾಮದ ಲಗಮಣ್ಣ ಸುರೇಶ ವಾಲಿಕಾರ ಹಾಗೂ ಇದೇ ಊರಿನ ಮಹಿಳೆಯೊಬ್ಬರು ಜತೆಯಾಗಿ ಸೋಮವಾರ ಮನೆ ಬಿಟ್ಟುಹೋಗಿದ್ದರು. ಈ ಮಾಹಿತಿ ಖಚಿತ ಮಾಡಿಕೊಂಡ ಮಹಿಳೆಯ ಪತಿ ಹಾಗೂ ಅವರ ಕುಟುಂಬದವರು, ಸ್ನೇಹಿತರು ಸೇರಿಕೊಂಡು ಲಗಮಣ್ಣನ ಮನೆ ಮೇಲೆ ದಾಳಿ ಮಾಡಿದರು. ಬುಧವಾರ ನಸುಕಿನ 2ರ ಸುಮಾರಿಗೆ ಕೊಡಲಿ, ಕುಡಗೋಲು, ಬಡಿಗೆ, ಕಲ್ಲು ಹಿಡಿದುಕೊಂಡು ಮನೆಗೆ ನುಗ್ಗಿದ ಆರೋಪಿಗಳ ಧ್ವಂಸ ಮಾಡಿದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆ ಬಿಟ್ಟುಹೋದ ಪುರುಷ ಹಾಗೂ ಮಹಿಳೆ ಇದೇ ಗ್ರಾಮದಲ್ಲಿ ತಮ್ಮತಮ್ಮ ಮಕ್ಕಳು– ಕುಟುಂಬದೊಂದಿಗೆ ವಾಸವಾಗಿದ್ದರು. ಮಕ್ಕಳಾದ ಮೇಲೂ ಇಬ್ಬರ ಮಧ್ಯೆ ‘ಸಂಬಂಧ’ ಇತ್ತು. ಇದೇ ಕಾರಣಕ್ಕೆ ಮನೆ ಬಿಟ್ಟುಹೋಗಿದ್ದಾರೆ. ಅವರ ಹುಡುಕಾಟಕ್ಕೆ ಯತ್ನ ನಡೆದಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಲಗಮಣ್ಣನ ತಾಯಿ ಯಮಕನಮರಡಿ ಠಾಣೆಗೆ ದೂರು ನೀಡಿದ್ದಾರೆ. ಮನೆ ಧ್ವಂಸಗೊಳಿಸಿ, ₹3 ಲಕ್ಷ ನಗದು ಸೇರಿ ಒಟ್ಟು ₹6 ಲಕ್ಷದ ವಸ್ತು ದರೋಡೆ ಮಾಡಲಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ಘಟನೆ ಕುರಿತು 112 ಸಂಖ್ಯೆಗೆ ಕರೆ ಬಂದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತ ಆಗಿದ್ದಾರೆ. ಇದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮದಲ್ಲಿ ಪೊಲೀಸ್‌ ಕಾವಲು ಏರ್ಪಡಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT