ಹೊಸಪೇಟೆ: ‘ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಪುಸ್ತಕ ಕೊಡಬೇಕು’ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ಕರ್ನಾಟಕ ಕಲಾಭಿಮಾನ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಾಡಿನ ಕಲೆ, ಸಂಸ್ಕೃತಿ ಬೆಳೆಯಬೇಕು. ಅದು ಮಕ್ಕಳಿಂದ ಸಾಧ್ಯ. ಹಾಗಾಗಿ ಅವರಲ್ಲಿ ಓದುವ ಸಂಸ್ಕೃತಿ ಬೆಳೆಸಬೇಕು. ಮೊಬೈಲ್ ವ್ಯಾಮೋಹದಿಂದ ಮಕ್ಕಳು ಓದುವುದು ಕಡಿಮೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪೋಷಕರು ಅದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.
‘ಮಕ್ಕಳಿಗೆ ಚಿಕ್ಕಂದಿನಿಂದಲೂ ಕಲೆಯನ್ನು ಆರಾಧಿಸುವ ಗುಣ ಮೂಡಿಸಬೇಕು. ಕಲೆ, ಸಂಸ್ಕೃತಿ ಉಳಿದರಷ್ಟೇ ಕಲಾವಿದರು ಬದುಕುಳಿಯುತ್ತಾರೆ. ಅರ್ಹ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು’ ಎಂದು ಹೇಳಿದರು.
ಸಂಘದ ಅಧ್ಯಕ್ಷ ಮೋಹನ್ ಕುಂಟಾರ್ ಮಾತನಾಡಿ, ‘ಕರ್ನಾಟಕ ಕಲಾಭಿಮಾನ ಸಂಘವು 25 ವರ್ಷಗಳಿಂದ ರಚನಾತ್ಮಕ ಕೆಲಸ ಮಾಡುತ್ತಿದೆ. ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಬದ್ಧವಾಗಿದೆ’ ಎಂದರು.
ಜಾನಪದ ತಜ್ಞ ಪ್ರೊ.ಬಿ.ಆರ್.ಪಾಟೀಲ, ವಾತ್ಸಲ್ಯ ಟ್ರಸ್ಟ್ ಕಾರ್ಯದರ್ಶಿ ಯಶಸ್ಚಿನಿ, ಸಂಘದ ಉಪಾಧ್ಯಕ್ಷ ಶ್ರೀಪತಿ ಆಚಾರ್, ಕೋಶಾಧ್ಯಕ್ಷ ಪಿ.ಸುಂದರನ್, ಕಾರ್ಯದರ್ಶಿ ಬಿ.ವಿ.ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.