ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟ ಹಿಂಸಾಚಾರಕ್ಕೆ ತಿರುಗಿದರೆ ಸರ್ಕಾರವೇ ಹೊಣೆ’

11ನೇ ದಿನ 255 ಕಿ.ಮೀ ಕ್ರಮಿಸಿದ ಪಂಚಮಸಾಲಿ ಶ್ರೀಗಳ ಪಾದಯಾತ್ರೆ
Last Updated 24 ಜನವರಿ 2021, 15:51 IST
ಅಕ್ಷರ ಗಾತ್ರ

ಹೂವಿನಹಡಗಲಿ: ‘ಲಿಂಗಾಯಿತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಒಬ್ಬರು ಪ್ರಾಣ ತೆತ್ತಿದ್ದಾರೆ. ಬರುವ ದಿನಗಳಲ್ಲಿ ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

2ಎ ಮೀಸಲಾತಿಗೆ ಆಗ್ರಹಿಸಿ ಪಂಚಲಕ್ಷ ಹೆಜ್ಜೆಗಳ ಪಾದಯಾತ್ರೆಯಲ್ಲಿ ಭಾನುವಾರ ಇಟ್ಟಿಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೀಸಲಾತಿ ಹೋರಾಟದಲ್ಲಿ ಮೋರಿಗೇರಿಯ ತುಪ್ಪದ ಈಶಪ್ಪನವರ ಬಲಿದಾನ ಆಗಿದೆ. ಪಾದಯಾತ್ರೆ ಬೆಂಗಳೂರು ತಲುಪುವ ವೇಳೆ ಇನ್ನಷ್ಟು ಸಾವು ನೋವು ಸಂಭವಿಸಬಹುದು. ಮೀಸಲಾತಿಗಾಗಿ ಸಮುದಾಯವನ್ನು ಹೋರಾಟಕ್ಕೆ ಇಳಿಸಿದ ಸರ್ಕಾರವೇ ಇದರ ಹೊಣೆ ಹೊರಬೇಕು ಎಂದರು.

ಹಿಂದುಳಿದ ವರ್ಗದ ಶೇ 15ರ ಮೀಸಲಾತಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡಲು ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ಇದಕ್ಕೆ ಕುಲಶಾಸ್ತ್ರ ಅಧ್ಯಯನದ ಅವಶ್ಯಕತೆಯಾಗಲಿ, ಹಿಂದುಳಿದ ವರ್ಗಗಳ ವರದಿಯ ಪರಿಶೀಲಿಸುವ ಪ್ರಮೇಯ ಬರುವುದಿಲ್ಲ. ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಿದ್ದಾರೆ. ಗಾಣಿಗರಿಗೂ ಇದೇ ಮಾದರಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಇವರನ್ನು ಹೋರಾಟಕ್ಕಿಳಿಸದೇ ಮೀಸಲಾತಿ ನೀಡಿರುವ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಹಗರಿಬೊಮ್ಮನಹಳ್ಳಿ ತಾಲ್ಲೂಕು ನೆಲ್ಲುಕುದುರೆಯಿಂದ ಪಾದಯಾತ್ರೆ ಆರಂಭಿಸಿದ ಸ್ವಾಮೀಜಿಯನ್ನು ತಾಲ್ಲೂಕಿನ ಇಟ್ಟಿಗಿ ಗ್ರಾಮದ ಹೊರ ವಲಯದಲ್ಲಿ ಸಮುದಾಯದವರು ಮಲ್ಲಿಗೆ ಹೂ ಚೆಲ್ಲಿ ಭವ್ಯವಾಗಿ ಸ್ವಾಗತಿಸಿದರು. ಅಪಾರ ಜನಸ್ತೋಮ ಪಾಲ್ಗೊಂಡಿದ್ದರಿಂದ 3 ಕಿ.ಮೀವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಕಳೆದ 11 ದಿನಗಳಲ್ಲಿ ಪಾದಯಾತ್ರೆ 255 ಕಿ.ಮೀ ಕ್ರಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT