ಹೊಸಪೇಟೆ (ವಿಜಯನಗರ): ಕೋವಿಡ್–19 ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ವಿಶ್ವಪ್ರಸಿದ್ಧ ಹಂಪಿ ಜೋಡಿ ರಥೋತ್ಸವ ರದ್ದುಪಡಿಸಲಾಗಿದೆ.
ಏ. 27ರಂದು ಹಂಪಿಯಲ್ಲಿ ವಿರೂಪಾಕ್ಷ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ನಡೆಯಬೇಕಿತ್ತು. ಸಾವಿರಾರು ಜನ ರಥೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇತ್ತು. ಅಷ್ಟೊಂದು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದರೆ ಕೋವಿಡ್ ಪ್ರಕರಣ ಮತ್ತಷ್ಟು ಏರಿಕೆಯಾಗಬಹುದು ಎಂದು ರದ್ದುಗೊಳಿಸಲಾಗಿದೆ.
‘ಸಾರ್ವಜನಿಕರು ಸೇರಬಹುದಾದ ಸಭೆ, ಸಮಾರಂಭ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಹಂಪಿ ಸ್ಮಾರಕಗಳಿಗೆ ಪ್ರವೇಶ ನಿಷೇಧ ಇರುವುದರಿಂದ ಸಹಜವಾಗಿಯೇ ಪ್ರವಾಸಿಗರು ವಿರೂಪಾಕ್ಷ ದೇವಸ್ಥಾನದ ಕಡೆಗೂ ಸುಳಿಯುತ್ತಿಲ್ಲ’ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್ ತಿಳಿಸಿದ್ದಾರೆ.
‘ಏ. 27ರಂದು ದೇವಸ್ಥಾನದಲ್ಲಿ ಅರ್ಚಕರು ವಿರೂಪಾಕ್ಷ, ಚಂದ್ರಮೌಳೇಶ್ವರ ಸ್ವಾಮೀಜಿಗೆ ಪೂಜೆ ನೆರವೇರಿಸಿ, ಸಾಂಕೇತಿಕವಾಗಿ ಧಾರ್ಮಿಕ ಕಾರ್ಯ ನೆರವೇರಿಸುವರು. ಭಕ್ತರಿಗೆ ನಿಷೇಧವಿದೆ. ಹೋದ ವರ್ಷದಂತೆ ಈ ವರ್ಷವೂ ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.