ಹೊಸಪೇಟೆ: ಇಲ್ಲಿನ ತಾಲ್ಲೂಕು ಕಚೇರಿಯ ಜನಸ್ನೇಹಿ ಕಚೇರಿಯಲ್ಲಿ ಶನಿವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದ ಪರಿಣಾಮ ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ.
ಸಿಬ್ಬಂದಿ ಈಗಷ್ಟೇ ಕಚೇರಿಗೆ ಬಂದಿದ್ದರು. ಬಾಗಿಲು ತೆಗೆದು ಒಳ ಹೋಗುವಷ್ಟರಲ್ಲಿ ಒಳಗಿನಿಂದ ದಟ್ಟ ಹೊಗೆ ಬರಲಾರಂಭಿಸಿತು. ನಂತರ ಬೆಂಕಿಯ ಕೆನ್ನಾಲಿಗೆ ಸಮೀಪದ ಎಲ್ಲ ಕೊಠಡಿಗಳಿಗೆ ಚಾಚಿಕೊಂಡಿದೆ.
ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಹಿಂಬಾಗಿಲಿನ ಮೂಲಕ ಕೆಲ ಕಡತಗಳನ್ನು ಹೊರಸಾಗಿಸಿದರು. ಆದರೆ, ದಟ್ಟ ಹೊಗೆಯಿಂದ ಎಲ್ಲ ದಾಖಲೆಗಳು ಹೊರತರಲು ಆಗಲಿಲ್ಲ. ಹೀಗಾಗಿ ದಾಖಲೆಗಳು ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನಗಳು ಬಂದಿವೆ.
ತಹಶೀಲ್ದಾರ್ ಎಚ್. ವಿಶ್ವನಾಥ್, ಡಿವೈಎಸ್ಪಿ ವಿ. ರಘುಕುಮಾರ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ವಿಷಯ ಗೊತ್ತಾಗಿ ಜನ ತಾಲ್ಲೂಕು ಕಚೇರಿ ಎದುರು ಸೇರಿದ್ದರು. ಬಳಿಕ ಪೊಲೀಸರು ಅವರನ್ನು ಕಳುಹಿಸಿದರು.