ಹೊಸಪೇಟೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಲು ಭಾನುವಾರ ನಗರದಲ್ಲಿ ಬೆಳ್ಳಿ ರಥದ ಮೆರವಣಿಗೆ ಮಾಡಲಾಯಿತು.
ಎಂ.ಜೆ. ನಗರದ ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಸದ ವೈ.ದೇವೇಂದ್ರಪ್ಪನವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೂವಿನಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿನ ರಾಮ–ಲಕ್ಷ್ಮಣ–ಸೀತೆ, ಹನುಮಂತನ ಉತ್ಸವಮೂರ್ತಿಗೆ ಪುಷ್ಪ ಗೌರವ ಸಲ್ಲಿಸಿದರು.
ನಂತರ ಬಡಾವಣೆಯಲ್ಲಿ ಸಾರ್ವಜನಿಕರಿಂದ ಮಂದಿರ ನಿರ್ಮಾಣಕ್ಕೆ ಸಾಂಕೇತಿಕವಾಗಿ ದೇಣಿಗೆ ಸಂಗ್ರಹಿಸಿ ಚಾಲನೆ ನೀಡಿದರು. ಬಳಿಕ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ಎಲ್ಲ ರಸ್ತೆಗಳಲ್ಲಿ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ರಥ ಬರುತ್ತಿದ್ದಂತೆ ಮಹಿಳೆಯರು ಹೂಮಳೆಗರೆದು, ಆರತಿ ಬೆಳಗಿ ನಮಿಸಿದರು.
ಚಿಣ್ಣರು ರಾಮ–ಲಕ್ಷ್ಮಣ–ಸೀತೆ ಹಾಗೂ ಹನುಮಂತ ವೇಷಧಾರಿಗಳಾಗಿ ಗಮನ ಸೆಳೆದರು. ಮಹಿಳೆಯರು ಭಕ್ತಿಭಾವದಿಂದ ಕೋಲಾಟ ಆಡಿದರು.
ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ, ಹುಡಾ ಅಧ್ಯಕ್ಷ ಅಶೋಕ ಜೀರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರೇವಣಸಿದ್ದಪ್ಪ, ಬಿಜೆಪಿ ಮುಖಂಡರಾದ ಚಂದ್ರಕಾಂತ ಕಾಮತ್, ಸಾಲಿ ಸಿದ್ದಯ್ಯ ಸ್ವಾಮಿ, ಕವಿತಾ ಈಶ್ವರ್ ಸಿಂಗ್, ಸಿದ್ದಾರ್ಥ ಸಿಂಗ್ ಇದ್ದರು.