ಮರಿಯಮ್ಮನಹಳ್ಳಿ: ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ಶನಿವಾರ ಪಟ್ಟಣಕ್ಕೆ ಬಂದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ವಾರ್ಡ್ ಮಹಿಳೆಯರು ಪುಷ್ಪವೃಷ್ಟಿ ಮಾಡಿ , ಕೇಕ್ ತಿನ್ನಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜಮ್ಮ ಜೋಗತಿ, ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಇಡೀ ತೃತೀಯಲಿಂಗಿ ಸಮುದಾಯಕ್ಕೆ, ಜಾನಪದ ಕಲಾಲೋಕಕ್ಕೆ ಸಲ್ಲಬೇಕು. ಎರಡ್ಮೂರು ದಿನಗಳಿಂದ ರಾಜ್ಯ ಸೇರಿದಂತೆ ಇಡೀ ದೇಶ ಜನರ ಹಾರೈಕೆಗಳ ಸುರಿಮಳೆಯಲ್ಲಿ ಮಿಂದಂತಾಗಿದೆ ಎಂದು ಸಂತಸ ಹಂಚಿಕೊಂಡರು.
ಹಿಂದೆ ಇಂತಹ ಅತ್ಯುನ್ನತ ಪ್ರಶಸ್ತಿಗಳು ನಗರಪ್ರದೇಶದಲ್ಲಿನ ದೊಡ್ಡ ದೊಡ್ಡ ಕಲಾವಿದರು, ಸಾಹಿತಿಗಳು ಸೇರಿದಂತೆ ಸಮಾಜದ ಸೇವೆಯಲ್ಲಿತೊಡಗಿಸಿದವರಿಗೆ ಮಾತ್ರ ಸಲ್ಲುತ್ತಿದ್ದವು. ಆದರೆ ಕಲೆಯನ್ನೇ ಜೀವನವಾಗಿಸಿಕೊಂಡ ಗ್ರಾಮೀಣ ಪ್ರದೇಶದ ನನ್ನಂತಹ ಸಾಮಾನ್ಯ ಕಲಾವಿದೆಯನ್ನು ಸಹ ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.