ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಗುರುರಾಘವೇಂದ್ರ ಬ್ಯಾಂಕ್‌:ಎಸಿಬಿ ದಾಳಿ

ಗ್ರಾಹಕರ ಠೇವಣಿ ಹಿಂತಿರುಗಿಸದೆ ಅಕ್ರಮ l ಐದು ಸ್ಥಳಗಳಲ್ಲಿ ಶೋಧ
Last Updated 18 ಜೂನ್ 2020, 21:56 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಗ್ರಾಹಕರ ಠೇವಣಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು, ಭಾರಿ ಅವ್ಯವಹಾರ ನಡೆಸಿದ ಆರೋಪಕ್ಕೊಳಗಾಗಿರುವ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ‌‌ ಪ್ರಧಾನ ಕಚೇರಿ, ಶಾಖಾ ಕಚೇರಿ ಸೇರಿದಂತೆ ಐದು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಶಂಕರಮಠ ಬಳಿಯ ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸೊಸೈಟಿ, ವಜಾಗೊಂಡ ಬ್ಯಾಂಕಿನ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ವಾಸುದೇವ ಮಯ್ಯ ಅವರ ಚಿಕ್ಕಲ್ಲಸಂದ್ರದ ಮನೆ ಮತ್ತು ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಅವರ ಬಸವನಗುಡಿಯ ಮನೆಗಳನ್ನೂ ಶೋಧಿಸಲಾಗುತ್ತಿದೆ.

ಗ್ರಾಹಕರ ಹಣದಲ್ಲಿ ₹ 1400 ಕೋಟಿಯನ್ನು ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿರುವುದು ರಿಸರ್ವ್‌ ಬ್ಯಾಂಕ್‌ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ವಿಚಾರಣೆಯಿಂದ ಬಯಲಿಗೆ ಬಂದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ರಿಸರ್ವ್‌ ಬ್ಯಾಂಕ್‌ ನಿಯಮಗಳಿಗೆ ವಿರುದ್ಧವಾಗಿ ಕೃತಕ ಠೇವಣಿ ಸೃಷ್ಟಿಸಿ 60 ಕಾಲ್ಪನಿಕ ಗ್ರಾಹಕರಿಗೆ ₹150 ಕೋಟಿ ಮಂಜೂರು ಮಾಡಲಾಗಿದೆ. ವಸೂಲಾಗದ ಸಾಲದ ಪ್ರಮಾಣ ಶೇ1ಕ್ಕಿಂತಲೂ ಕಡಿಮೆ ಇದೆ ಎಂದು ಬ್ಯಾಂಕಿನ ಬ್ರೌಷರ್‌‌ನಲ್ಲಿ ಹೇಳಲಾಗಿದೆ. ಆದರೆ, ವಾಸ್ತವವಾಗಿ ಶೇ 25 ರಿಂದ 30ರಷ್ಟಿರುವುದು ತನಿಖೆಯಿಂದ ಗೊತ್ತಾಗಿದೆ.

ದಾಖಲೆಗಳೇ ಇಲ್ಲ: ಗುರುರಾಘವೇಂದ್ರ ಬ್ಯಾಂಕ್‌ನಲ್ಲಿ 2,876 ಸಾಲದ ಖಾತೆಗಳು ಹಾಗೂ ಇವುಗಳಿಗೆ ನೀಡಿರುವ ಸಾಲಕ್ಕೆ ದಾಖಲೆಗಳೇ ಇಲ್ಲ ಎಂದು ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಬ್ಯಾಂಕ್‌ ಸಿಕ್ಕಾಪಟ್ಟೆ ನಷ್ಟದಲ್ಲಿದ್ದರೂ ₹149 ಕೋಟಿ ಲಾಭ ಮಾಡಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ₹ 2,000 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿದ್ದು, ₹ 650 ಕೋಟಿಯಷ್ಟು ಸಾಂಸ್ಥಿಕ ಠೇವಣಿಯೂ ಸೇರಿದೆ. ಸಂಘಕ್ಕೆ ಬ್ಯಾಂಕಿನ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪವೂ ಬ್ಯಾಂಕಿನ‌ ಸಿಇಒ, ಅಧ್ಯಕ್ಷರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT