ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಾದರಿ ಕೆಂಪೇಗೌಡ ಜಯಂತಿ ಆಚರಣೆಯ ಮನವಿಗೆ ಸರ್ಕಾರದ ಒಪ್ಪಿಗೆ

ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತೇ ವ್ಯಂಗ್ಯ ಮಾಡಲಾಯಿತು: ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಬೇಸರ
Last Updated 28 ಜೂನ್ 2022, 5:19 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಕುರಿತೇ ವ್ಯಂಗ್ಯ ಮಾಡಲಾಯಿತು ಎಂದು ಆದಿಚುಂಚನಗಿರಿಯ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ಸೋಮವಾರ ನಡೆದ ಕೆಂಪೇಗೌಡರ 513ನೇ ಜಯಂತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನಲ್ಲಿ ಕ್ರಾಂತಿಯ, ಭಕ್ತಿಯ ಕಹಳೆ ಮೊಳಗಿಸಿದವರು ಕುವೆಂಪು. ಶೂದ್ರ ಸಮುದಾಯದಲ್ಲಿ ಕವಿಗಳು, ಜ್ಞಾನಿಗಳು, ನಾಯಕರು ಉದಯಿಸಿದ್ದಾರೆ. ಅದೇ ಶೂದ್ರ ಸಮುದಾಯದ ಕವಿ ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು ಎಂದರು.

ಕೆಂಪೇಗೌಡರ ಪ್ರತಿಮೆಯನ್ನು ಈ ಹಿಂದೆಯೇ ವಿಧಾನಸೌಧ ಎದುರು ನಿರ್ಮಿಸಬೇಕಿತ್ತು. ವಿಳಂಬವಾಗಿದೆ. ಪ್ರತಿಮೆ ನಿರ್ಮಿಸುವಂತೆ ಮನವಿ ಮಾಡಲಾಗಿದ್ದು, ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ ಎಂದರು. ಕೆಂಪೇಗೌಡ ಪಾಳೆಗಾರರು ಆಗಿರಲಿಲ್ಲ, ರಾಜರಾಗಿದ್ದರು. ಅದಕ್ಕೇ ಕೆಂಪೇಗೌಡರು ನಾಡಪ್ರಭು ಆಗಿದ್ದು. ನಗರದಲ್ಲಿ 60 ಪೇಟೆಗಳನ್ನು ನಿರ್ಮಿಸಿ ನಾಡಿನ ಅಭಿವೃದ್ಧಿ ಪಡಿಸಿದ್ದರು ಎಂದು ಹೇಳಿದರು.

ಕೆಂಪೇಗೌಡ ಜಯಂತಿಯನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಅದಕ್ಕೂ ಸರ್ಕಾರ ಒಪ್ಪಿದೆ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಾತನಾಡಿ, ’ಒಕ್ಕಲಿಗ ಸಮುದಾಯವು ಒಡೆಯಬಾರದು. ಸಮುದಾಯ ಉಳಿಯಬೇಕು‘ ಎಂದರು.
ಒಕ್ಕಲಿಗರ ಸಂಘಕ್ಕೆ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಮುಂದೆಯೂ ಸಂಘವು ಉತ್ತಮ ಕೆಲಸ ಮಾಡಲಿ. ಇಬ್ಬರೂ ಸ್ವಾಮೀಜಿಗಳು ಒಕ್ಕಲಿಗ ಸಮಾಜಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.

ಶಿರಾ ತಾಲ್ಲೂಕು ಪಟ್ಟನಾಯನಹಳ್ಳಿ ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಅವಮಾನಿಸುವ ಮನಸ್ಸುಗಳಿಗೆ ಉತ್ತರ ಕೊಡಬೇಕಿದೆ ಎಂದು ಕರೆ ನೀಡಿದರು.

ತಪ್ಪು ಇತಿಹಾಸ ಬರೆದು, ತಪ್ಪಾಗಿಯೇ ಮಕ್ಕಳಿಗೆ ಬೋಧಿಸಿದರೆ ಅವರ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದರು. ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ’ಆದರ್ಶದ ಅನುಷ್ಠಾನದಲ್ಲಿ ಕೊರತೆಯಿದೆ. ಮಾತನಾಡುವುದೇ ಆಡಳಿತ ಆಗಬಾರದು. ಆಡಳಿತ ವ್ಯವಸ್ಥೆಗೆ ಹೊಸದಿಕ್ಕು ಕಲ್ಪಿಸಿದವರು ಕೆಂಪೇಗೌಡರು’ ಎಂದು ಹೇಳಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿದರು.

ಸಂಘದ ಅಧ್ಯಕ್ಷ ಸಿ.ಎನ್‌.ಬಾಲಕೃಷ್ಣ, ಟಿ.ಕೋನಪ್ಪರೆಡ್ಡಿ ಮೊದಲಾದವರು ಹಾಜರಿದ್ದರು.

ಜಯಂತಿ ಅಂಗವಾಗಿ ವಿವಿಧ ಕಲಾ ತಂಡಗಳ ನೇತೃತ್ವದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಜಾನಪದ ಗೀತಗಾಯನ ಹಾಗೂ ಕೆಂಪೇಗೌಡ ನೃತ್ಯರೂಪಕ ಗಮನ ಸೆಳೆಯಿತು.

ಡಿ.ಕೆ.ಶಿಗೆ ಸಹೋದರ ಎಂದ ಎಚ್‌ಡಿಕೆ

ಎಚ್‌.ಡಿ.ಕುಮಾರಸ್ವಾಮಿ ಅವರು ವೇದಿಕೆಯ ಮೇಲಿದ್ದ ಗಣ್ಯರ ಹೆಸರು ಹೇಳುವಾಗ ಡಿ.ಕೆ.ಶಿವಕುಮಾರ ಅವರನ್ನು ಸಹೋದರ ಎಂದರು ಹೇಳಿದರು. ಆಗ ಸಭಿಕರು ಶಿಳ್ಳೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT