ಬೆಂಗಳೂರು: ನಗರದ ಹಲವು ಕಚೇರಿಗಳಲ್ಲಿ ಶನಿವಾರವೇ ಆಯುಧ ಪೂಜೆ ಆಚರಿಸಲಾಯಿತು.
ಭಾನುವಾರ, ಸೋಮವಾರ (ಆಯುಧಪೂಜೆ), ಮಂಗಳವಾರ (ವಿಜಯದಶಮಿ) ರಜೆ ಇರುವುದರಿಂದ ಬಹುತೇಕ ಕಚೇರಿಗಳಲ್ಲಿ ಶನಿವಾರ ಪೂಜಾ ಕಾರ್ಯಗಳು ನಡೆದವು. ಮೂರು ದಿನ ಸರಣಿ ರಜೆ ಸಿಕ್ಕಿರುವುದರಿಂದ ಸೋಮವಾರದ ಆಯುಧಪೂಜೆಗೆ ಕಾಯದೆ ಶನಿವಾರವೇ ಕಚೇರಿ ಪೂಜೆ ಮುಗಿಸಿದರು. ಮಧ್ಯಾಹ್ನದ ನಂತರ ಬಹುತೇಕ ಕಚೇರಿಗಳು ಸಿಬ್ಬಂದಿಯಿಲ್ಲದೆ ಖಾಲಿಯಾಗಿದ್ದವು.
ಸರ್ಕಾರಿ ಕಚೇರಿಗಳಲ್ಲಿ ಶನಿವಾರವೇ ಪೂಜೆ ಮುಗಿಯಿತು. ವಿಧಾನಸೌಧ, ವಿಕಾಸಸೌಧ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕಚೇರಿ ಪೂಜೆ ನಡೆಯಿತು. ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹೊಸ ಬಟ್ಟೆ ತೊಟ್ಟು ನೌಕರರು ಸಂಭ್ರಮಿಸಿದರು. ಸ್ಥಳೀಯ ಸಂಸ್ಥೆಗಳಲ್ಲಿಯೂ ಸಂಭ್ರಮದಿಂದ ಪೂಜೆ ನೆರವೇರಿಸಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿಯ ಸಾರ್ವಜನಿಕರ ಸಂಪರ್ಕ, ಎಂ.ಪಿ.ಇ.ಡಿ, ನಗರ ಯೋಜನೆ, ಅರಣ್ಯ ಘಟಕ, ಕೌನ್ಸಿಲ್ ಕಾರ್ಯಾಲಯ, ಹಣಕಾಸು ವಿಭಾಗದಲ್ಲಿ ಪೂಜಾ ಸಮಾರಂಭ ಏರ್ಪಡಿಸಲಾಗಿತ್ತು. ವಾಹನಗಳನ್ನು ಅಲಂಕರಿಸಿ ಪೂಜಿಸಲಾಯಿತು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬಹುತೇಕ ಎಲ್ಲ ವಿಭಾಗಗಳ ಕಚೇರಿಗೆ ತೆರಳಿ ಪೂಜೆ ಸಲ್ಲಿಸಿದರು. ಅಧಿಕಾರಿ ಮತ್ತು ಸಿಬ್ಬಂದಿಗೆ ದಸರಾ ಹಬ್ಬದ ಶುಭಾಶಯ ಕೋರಿದರು. ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಅಧ್ಯಕ್ಷ ಅಮೃತ್ರಾಜ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಬಿಡಿಎ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕುಂಬಳಕಾಯಿ ಒಡೆದು, ಕುಂಕುಮ ಹಚ್ಚಿ, ಆರತಿ ಎತ್ತಿ ಆಯುಧ ಪೂಜೆ ನಡೆಸಿದರು.
ಬಹುತೇಕ ಖಾಸಗಿ ಫ್ಯಾಕ್ಟರಿ, ಕಾರ್ಖಾನೆ, ಕಂಪನಿಗಳಲ್ಲಿ ಶುಕ್ರವಾರವೇ ಆಯುಧ ಪೂಜೆ ನಡೆಯಿತು. ಪೂಜೆ ಮುಗಿಸಿ ಹಲವು ಉದ್ಯೋಗಿಗಳು ಊರು ಅಥವಾ ಪ್ರವಾಸಕ್ಕೆ ತೆರಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಚಾಮುಂಡಿದೇವಿಗೆ ಶನಿವಾರ ಪೂಜೆ ಸಲ್ಲಿಸಿದರು