ಬೆಂಗಳೂರು: ಜನರು ಹೆಚ್ಚು ಸೇರುವ ಜಾತ್ರೆಗಳು ಹಾಗೂ ಆಭರಣ ಮಳಿಗೆಯಲ್ಲಿ ಚಿನ್ನದ ಸರ ಕಳ್ಳತನ ಮಾಡುತ್ತಿದ್ದ ಆರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಠಾಣೆ ವ್ಯಾಪ್ತಿಯಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಚಿನ್ನದ ಸರ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಆರೋಪಿಗಳಾದ ಜಯದುಂಬಿ, ಶೌಕತ್, ಚುಮನ್ಸಾಬ್, ಮುನ್ನಾ ಸೇರಿದಂತೆ ಆರು ಮಂದಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳು, ಚಿತ್ರದುರ್ಗ ಭರಮಸಾಗರದವರು. ಇವರಿಂದ ₹16 ಲಕ್ಷ ಮೌಲ್ಯದ 383 ಗ್ರಾಂ ತೂಕದ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಬನಶಂಕರಿ ಹಾಗೂ ಇತರೆ ಜಾತ್ರೆಗಳಲ್ಲಿ ಓಡಾಡುತ್ತಿದ್ದ ಆರೋಪಿಗಳು, ಮಹಿಳೆಯರ ಚಿನ್ನದ ಸರ ಕದಿಯುತ್ತಿದ್ದರು. ಅದೇ ಸರಗಳನ್ನು ಮಾರಿ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ಜಾತ್ರೆಗಳು ಇಲ್ಲದ ಸಂದರ್ಭದಲ್ಲಿ, ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.