ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 100ರಲ್ಲಿ 10 ಮಂದಿಗೆ ಸೋಂಕು

ನಿತ್ಯವೂ 500ಕ್ಕೂ ಅಧಿಕ ಕೋವಿಡ್‌–19 ಪ್ರಕರಣಗಳು ದಾಖಲು
Last Updated 3 ಜುಲೈ 2020, 22:05 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ದಿನಗಳಿಂದ ಈಚೆಗೆ ನಗರದಲ್ಲಿ ಕೋವಿಡ್‌ ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗಿನ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಈ ಪ್ರಮಾಣ ಶೇ 5.33ರಷ್ಟಿದೆ.

ಲಾಕ್‌ಡೌನ್‌ ಜಾರಿಯಲ್ಲಿದ್ದ ಮೇ 31ರವರೆಗೂ ಈ ಪ್ರಮಾಣ ಶೇ 1.17ರಷ್ಟಿತ್ತು. 24 ಗಂಟೆಗಳಲ್ಲಿ ನಗರದ 15 ವಾರ್ಡ್‌ಗಳಲ್ಲಿ 10ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಪೂರ್ವ ವಲಯದ ಶಾಂತಲಾ ನಗರ ವಾರ್ಡ್‌ನಲ್ಲಿ ಅತ್ಯಧಿಕ (30) ಪ್ರಕರಣಗಳು ಪತ್ತೆಯಾಗಿವೆ. ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ ವಾರ್ಡ್ ಎರಡನೇ ಸ್ಥಾನದಲ್ಲಿದೆ (29). ದಕ್ಷಿಣ ವಲಯದ ಜಯನಗರ ವಾರ್ಡ್‌ನಲ್ಲಿ 22 ಪ್ರಕರಣಗಳು ದೃಢಪಟ್ಟಿವೆ. ಬೊಮ್ಮನಹಳ್ಳಿ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ಗಳಲ್ಲಿ ತಲಾ 21 ಪ್ರಕರಣಗಳು, ವಿದ್ಯಾಪೀಠ ವಾರ್ಡ್‌ನಲ್ಲಿ 20 ಪ್ರಕರಣಗಳು ಕಂಡು ಬಂದಿವೆ.

ನಗರದಲ್ಲಿ ನಿತ್ಯವೂ 500ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಆ ಪ್ರದೇಶಗಳಲ್ಲಿ ಸೋಂಕು ನಿವಾರಕ ಸಿಂಪಡಿಸುವ ಹಾಗೂ ಸೋಂಕಿತರ ನೇರ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡುವ ಕಾರ್ಯಗಳೂ ವಿಳಂಬವಾಗುತ್ತಿವೆ. ಹಾಗಾಗಿ ಒಂದು ವಾರದಿಂದ ಕಂಟೈನ್‌ಮೆಂಟ್‌ ಪ್ರದೇಶಗಳ ವಿವರವನ್ನು ಪ್ರಕಟಿಸುವುದನ್ನು ಬಿಬಿಎಂಪಿ ವಾರ್‌ ರೂಂ ಸ್ಥಗಿತಗೊಳಿಸಿದೆ.

ಹಜ್‌ ಭವನ ಮತ್ತು ಶ್ರೀಶ್ರೀ ರವಿಶಂಕರ್‌ ಆಯುರ್ವೇದ ಆಸ್ಪತ್ರೆಯ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಜ್ಜುಗೊಳಿಸಿದ್ದ ಎಲ್ಲ ಹಾಸಿಗೆಗಳು ನಾಲ್ಕು ದಿನಗಳ ಹಿಂದೆಯೇ ಭರ್ತಿಯಾಗಿವೆ. ಮೂರು ದಿನಗಳಿಂದೀಚೆಗೆ 2,127 ಮಂದಿಯಲ್ಲಿ ಸೋಂಕು ಕಂಡುಬಂದಿದ್ದರೂ 164 ಮಂದಿಯನ್ನು ಮಾತ್ರ ಜಿಕೆವಿಕೆ ಪ್ರಾಂಗಣದ ಹಾಸ್ಟೆಲ್‌ನಲ್ಲಿ ಆರಂಭಿಸಿರುವ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಇನ್ನೂ 553 ಹಾಸಿಗೆಗಳು ಲಭ್ಯ ಇವೆ.

‘ವಿವಿಧ ಆರೈಕೆ ಕೇಂದ್ರಗಳಲ್ಲಿ ಶುಕ್ರವಾರ ಮತ್ತೆ 900 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ 400 ಹಾಗೂ ಕೆಂಗೇರಿಯ ಮೆಡ್‌ಸೋಲ್‌ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ವ್ಯವಸ್ಥೆ ಶನಿವಾರದೊಳಗೆ ಸಿದ್ಧವಾಗಲಿದೆ’ ಎಂದು ಆರೈಕೆ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜೇಂದರ್‌ ಕುಮಾರ್‌ ಕಟಾರಿಯಾ ಮಾಹಿತಿ ನೀಡಿದರು.

ಕಾರ್ಮಿಕರಿಗೆ300 ಹಾಸಿಗೆಮೀಸಲು
ಕೊರೊನಾ ಸೋಂಕಿತ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಇಂದಿರಾನಗರದ ಇಎಸ್‌ಐ ಆಸ್ಪತ್ರೆಯಲ್ಲಿ 300 ಹಾಸಿಗೆಗಳನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿದೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.

ವೈದ್ಯರ ಜತೆಗೆ ಸಮಾಲೋಚನೆ ಸಡೆಸಿದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಕೋವಿಡೇತರ ರೋಗಿಗಳಿಗೂ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

‘ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಇರುವ ಅವಕಾಶಗಳು ಹಾಗೂ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕಾರ್ಮಿಕರು ಚಿಕಿತ್ಸೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಬಾರದು. ಕೋವಿಡೇತರ ರೋಗಿಗಳಿಗೂ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂದು ಸೂಚಿಸಿದ್ದೇನೆ. ಕೆಲವೇ ದಿನಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳು ಸಿದ್ಧವಾಗಲಿವೆ’ ಎಂದು ಶಿವರಾಮ ಹೆಬ್ಬಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT