ಬೆಂಗಳೂರು: ಲಾಕ್ಡೌನ್ ಘೋಷಿಸಿದ್ದರೂ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುತ್ತಿರುವವರನ್ನು ನಿರ್ಬಂಧಿಸಲು ಹಲಸೂರು ಸಂಚಾರ ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ತವ್ಯನಿರತ ಕಾನ್ಸ್ಟೆಬಲ್ಗಳಿಬ್ಬರು ಕೊರೊನಾ ವೈರಸ್ ಮಾದರಿ ಹೆಲ್ಮೆಟ್ ಧರಿಸಿಕೊಂಡಿದ್ದು, ಒಬ್ಬರು ಶಂಖ ಊದುತ್ತಾರೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಕಾರು, ಬೈಕ್ ಸವಾರರನ್ನು ಅಡ್ಡಗಟ್ಟಿ ಕೊರೊನಾ ಸೋಂಕಿನ ಗಂಭೀರತೆ ಕುರಿತು ಅರಿವು ಮೂಡಿಸುತ್ತಾರೆ.
ದ್ವಿಚಕ್ರ ವಾಹನ ಸವಾರರ ತಲೆಗೆ ಕೊರೊನಾ ವೈರಸ್ ಮಾದರಿಯ ಹೆಲ್ಮೆಟ್ ಹಾಕುವ ಪೊಲೀಸರು, ಸೋಂಕು ತಗುಲಿದರೆ ಸಾವಿನ ಹಾದಿ ಹಿಡಿದಂತೆ ಎಂದು ಎಚ್ಚರಿಕೆ ನೀಡುತ್ತಾರೆ. ಹೀಗಾಗಿ ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡುತ್ತಾರೆ. ಪೊಲೀಸರು ಮಾಡಿರುವ ಪ್ರಯೋಗದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.
ಕೊರೊನಾ ಸೋಂಕು ಕುರಿತು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಭಿತ್ತಿಪತ್ರಗಳು, ಸಿಬ್ಬಂದಿಯಿಂದ ಪ್ರಮುಖ ಸಿಗ್ನಲ್ ಗಳಲ್ಲಿ ಆಂಗಿಕ ಸನ್ನೆಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಹಲಸೂರು ಪೊಲೀಸರು ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ಜನರು ಸ್ಪಂದಿಸಬೇಕಿದೆ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ನಾರಾಯಣ ತಿಳಿಸಿದರು.