ಬೆಂಗಳೂರು:ದೀಪಾವಳಿ ಹಬ್ಬ ಮುಗಿದರೂ ನಗರದಲ್ಲಿ ಪಟಾಕಿ ಅವಘಡಗಳು ನಿಂತಿಲ್ಲ. ಮಕ್ಕಳು ಸೇರಿ ವಿವಿಧ ವಯೋಮಾನದ 100ಕ್ಕೂ ಅಧಿಕ ಮಂದಿಯ ಕಣ್ಣಿಗೆ ಪಟಾಕಿ ಕಿಡಿ ಹಾನಿ ಮಾಡಿದೆ.
ಪಟಾಕಿಯಿಂದ ಸಂಭವಿಸುವ ಅವಘಡದ ಬಗ್ಗೆ ವೈದ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಬ್ಬಕ್ಕೂ ಮುನ್ನ ಜಾಗೃತಿ ಮೂಡಿಸಿದ್ದರು. ಇಷ್ಟಾಗಿಯೂ ಐದು ದಿನಗಳಿಂದ ಪಟಾಕಿ ಅವಘಡಗಳು ನಗರದ ವಿವಿಧೆಡೆ ವರದಿಯಾಗುತ್ತಿವೆ. ಕೆಲವರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿ ನಷ್ಟದ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 30ಕ್ಕೂ ಅಧಿಕ ಹಾಗೂ ನಾರಾಯಣ ನೇತ್ರಾಲಯದಲ್ಲಿ 50ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ನೇತ್ರಧಾಮ, ಶಂಕರ ಕಣ್ಣಿನ ಆಸ್ಪತ್ರೆ, ಆಸ್ಟರ್ ಸಿಎಂಐ, ಶಂಕರ ಕಣ್ಣಿನ ಆಸ್ಪತ್ರೆ, ಮೋದಿ ಕಣ್ಣಿನ ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಪಟಾಕಿ ಗಾಯ ಪ್ರಕರಣಗಳು ವರದಿಯಾಗಿವೆ.
ಗಾಯಗೊಂಡವರಲ್ಲಿ ಹೆಚ್ಚಿನವರು ಲಕ್ಷ್ಮೀ ಬಾಂಬ್, ಬಿಜ್ಲಿ ಪಟಾಕಿ ಹಾಗೂ ಫ್ಲವರ್ ಪಾಟ್ ಸಿಡಿಸಿದವರಾಗಿದ್ದಾರೆ.
ಮಾಗಡಿಯ ತ್ಯಾಗೆರೆಪಾಳ್ಯ ದಲ್ಲಿವಾಹನಗಳಿಗೆ ಪೂಜೆ ಮಾಡುತ್ತಿದ್ದ50 ವರ್ಷದ ಮಹಿಳೆಗೆ ಪಟಾಕಿ ಕಿಡಿ ತಾಕಿ, ಕಣ್ಣಿಗೆ ಗಾಯವಾಗಿದೆ. ಅವರು ನಾರಾಯಣ ನೇತ್ರಾಲಯಕ್ಕೆ ದಾಖಲಾಗಿದ್ದಾರೆ.ಮೂಡಲಪಾಳ್ಯದ 17 ವರ್ಷದ ವ್ಯಕ್ತಿ, ಹೂಕುಂಡಕ್ಕೆ ಬೆಂಕಿ ಹೊತ್ತಿರುವ ಬಗ್ಗೆ ಪರಿಶೀಲಿಸುವಾಗ ಸ್ಫೋಟಗೊಂಡಿದೆ. ಇದರಿಂದಾಗಿ ಕಣ್ಣಿಗೆ ಗಂಭೀರ ಹಾನಿಯಾಗಿದೆ.
ಪ್ರಕರಣ ಹೆಚ್ಚಳ:
‘ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಂಡವರಲ್ಲಿ13 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. 7 ಮಂದಿಗೆ ಗಂಭೀರ ಸ್ವರೂಪದ ಹಾನಿಯಾಗಿದ್ದು, ದೃಷ್ಟಿ ಬರುವ ಸಾಧ್ಯತೆ ಕಡಿಮೆಯಿದೆ. ಪಟಾಕಿ ಅವಘಡ ಪ್ರಕರಣಗಳು ಈ ವರ್ಷ ಹೆಚ್ಚಳವಾಗಿದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷಡಾ. ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘2019ರಲ್ಲಿ 35 ಮಂದಿ, 2020ರಲ್ಲಿ 24 ಮಂದಿ ಹಾಗೂ 2021ರಲ್ಲಿ 17 ಮಂದಿ ಪಟಾಕಿ ಅವಘಡಗಳ ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಪಟಾಕಿ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.