ಬೆಂಗಳೂರು: ಹಲಸೂರು ಠಾಣೆ ವ್ಯಾಪ್ತಿಯ ದೊಮ್ಮಲೂರು ರಸ್ತೆ ಬಳಿಯ ಪ್ರದೇಶದಲ್ಲಿ ಕಿರಣ್ ಎಂಬವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
‘ಸ್ಥಳೀಯ ನಿವಾಸಿ ಕಿರಣ್, ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಕಿರಣ್ ಅವರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಶುಕ್ರವಾರ ಬೆಳಿಗ್ಗೆ ಬಂದಿದ್ದ ಮಾಹಿತಿ ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕಿರಣ್ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ, ಕೊಲೆ ಪ್ರಕರಣ ದಾಖಲಿಸಲಾಗಿದೆ’ ಎಂದರು.
ಹಿಂಬಾಲಿಸಿ ಬಂದು ಕೊಲೆ: ‘ಕಿರಣ್ ಗುರುವಾರ ತಡರಾತ್ರಿ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬಾರ್ಗೆ ಹೋಗಿದ್ದರು. ಅಲ್ಲಿ ಕೆಲ ಯುವಕರ ನಡುವೆ ಜಗಳವಾಗಿತ್ತು. ಸಿಬ್ಬಂದಿ ಜಗಳ ಬಿಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬಳಿಕ ದೊಮ್ಮಲೂರು ರಸ್ತೆಯಲ್ಲಿ ಕಿರಣ್ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಕೃತ್ಯ ಎಸಗಿದ್ದಾರೆ. ಕಿರಣ್ ಅವರನ್ನು ಸ್ಥಳೀಯರು ಮೊದಲು ಬೌರಿಂಗ್ ಆಸ್ಪತ್ರೆಗೆ ಸೇರಿಸಿದ್ದು, ಬಳಿಕ ನಿಮ್ಹಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು’ ಎಂದು ಹೇಳಿದರು.
‘ತಲೆಗೆ ಪೆಟ್ಟಾಗಿ ಕಿರಣ್ ಸತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಮಾಹಿತಿ ತಿಳಿಯಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.