ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ | ಸಂಕಷ್ಟದ ಜನರಿಗೆ ತ್ವರಿತ ಸ್ಪಂದನೆ

Last Updated 30 ಏಪ್ರಿಲ್ 2020, 21:47 IST
ಅಕ್ಷರ ಗಾತ್ರ

ಯಲಹಂಕ: ಲಾಕ್‌ಡೌನ್‌ ಘೋಷಿಸಿರುವುದರಿಂದ ಬ್ಯಾಟರಾಯನಪುರ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳು ಹಾಗೂ ಜಾಲಾ ಹೋಬಳಿ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿರುವ ಕೂಲಿಕಾರ್ಮಿಕರು ಹಾಗೂ ಬಡಜನರ ನೆರವಿಗೆ ನಿಲ್ಲುವ ಮೂಲಕ ಅವರ ಹಸಿವನ್ನು ನೀಗಿಸುವ ಕಾರ್ಯದಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ರವಿ ತೊಡಗಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೂರು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಮನೆಯಲ್ಲಿ ಸುಮ್ಮನೆ ಕೂರದೆ ಅದೇ ಚೈತನ್ಯ ಮತ್ತು ಹುಮ್ಮಸ್ಸಿನಿಂದ ಇಡೀ ಕ್ಷೇತ್ರದಾದ್ಯಂತ ಸಂಚರಿಸಿ, ಸಂಕಷ್ಟದಲ್ಲಿರುವ ಬಡಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಏಳು ಬಿಬಿಎಂಪಿ ವಾರ್ಡ್‌ಗಳನ್ನೂ ಒಳಗೊಂಡಂತೆ 10 ಗ್ರಾಮಪಂಚಾಯಿತಿಗಳು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಬರುತ್ತಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ತನ್ನ ಗಡಿರೇಖೆಯನ್ನು ಚಾಚಿಕೊಂಡಿದೆ. ಇಲ್ಲಿ ಸಾವಿರಾರು ಕೂಲಿಕಾರ್ಮಿಕರು ಹಾಗೂ ಬಡಜನರು ನೆಲೆಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಇವರೆಲ್ಲಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ರವಿ ಅವರು ಕ್ಷೇತ್ರದಾದ್ಯಂತ ಸಂಚರಿಸಿ, ಅಂತಹ ಜನರಿಗೆ ಊಟ, ದಿನಸಿ, ಹಣ್ಣು ಹಾಗೂ ತರಕಾರಿಗಳನ್ನು ವಿತರಿಸುವ ಮೂಲಕ ಹಸಿವನ್ನು ನೀಗಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೇ ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಮುಖಗವಸು ಮತ್ತು ಸ್ಯಾನಿಟೈಸರ್ ವಿತರಿಸಿದರು. ನಂತರ ಶೆಡ್‌ಗಳಲ್ಲಿ ವಾಸಿಸುತ್ತಿದ್ದ ಸುಮಾರು 4 ಸಾವಿರ ಜನರಿಗೆ ಎರಡು ಹೊತ್ತು ಊಟದ ಪಾಕೆಟ್‌ಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ವಿದ್ಯಾರಣ್ಯಪುರ ಹಾಗೂ ದೊಡ್ಡಬೊಮ್ಮಸಂದ್ರ ವಾರ್ಡ್‌ ವ್ಯಾಪ್ತಿಯ ಬಡಾವಣೆಗಳಲ್ಲಿ 10 ದಿನಗಳ ಕಾಲ ಸೋಂಕು ನಿವಾರಕ ಔಷಧಿ ಸಿಂಪಡಿಸಲು ವ್ಯವಸ್ಥೆ ಮಾಡಿದ್ದಾರೆ.‌

ದಿನಸಿ ಕಿಟ್ ಹಾಗೂ ಆಹಾರದ ಪ್ಯಾಕೇಟ್‌ಗಳನ್ನು ಸಿದ್ಧಪಡಿಸಿ, ಬಡವರಿಗೆ ತಲುಪಿಸುವ ಕಾರ್ಯದಲ್ಲಿ 200ಕ್ಕೂ ಹೆಚ್ಚು ಬೆಂಬಲಿಗರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು, ಹಸಿದವರಿಗೆ ಅನ್ನ ನೀಡುವ ಈ ಕಾರ್ಯದಲ್ಲಿ ರವಿ ಅವರೊಂದಿಗೆ ಕೈಜೋಡಿಸಿದ್ದಾರೆ. ಅಲ್ಲದೆ ಪಾರ್ಶ್ವನಾಥ್ ಜೈನ್ ತೀರ್ಥ ಧಾಮ್ ಹಾಗೂ ದಿವ್ಯಶ್ರೀ ಡೆವಲಪರ್ಸ್ (ರೇವಾ ವಿಶ್ವವಿದ್ಯಾಲಯ) ಸಂಸ್ಥೆಗಳೂ ಸೇರಿದಂತೆ ಹಲವು ದಾನಿಗಳೂ ನೆರವು ನೀಡಿದ್ದಾರೆ ಎಂದು ರವಿ ಹೇಳಿದರು.

’ಕೋವಿಡ್-19ರ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರಗಳಿಂದ ಇಡೀ ಪ್ರಪಂಚದ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಡೀ ದೇಶದಲ್ಲಿಯೇ ಮೊದಲ ಭಾರಿ ಲಾಕ್‌ಡೌನ್‌ ಜಾರಿಮಾಡಿದ ಮುಖ್ಯಮಂತ್ರಿಯಾಗಿದ್ದು, ಸೋಂಕುನಿಯಂತ್ರಣದಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಅಲ್ಲದೆ ಸಾರ್ವಜನಿಕರು, ಬಡವರು ಹಾಗೂ ರೈತರಿಗೆ ತೊಂದರೆಯಾಗದಂತೆ ಅಗತ್ಯ ಸರ್ಕಾರಿ ಸೌಲಭ್ಯಗಳ ಜೊತೆಗೆ ಸಂಘ-ಸಂಸ್ಥೆಗಳಿಂದಲೂ ನೆರವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

12 ಸಾವಿರ ದಿನಸಿ ಕಿಟ್
ಜಾಲಾ ಹೋಬಳಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ 10 ಸಾವಿರ ಹಾಗೂ ಥಣಿಸಂದ್ರ, ಕುವೆಂಪುನಗರ ಹಾಗೂ ಬ್ಯಾಟರಾಯನಪುರ ವಾರ್ಡ್‌ಗಳಲ್ಲಿ 2 ಸಾವಿರ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ.

ದೊಡ್ಡಬೊಮ್ಮಸಂದ್ರದಲ್ಲಿ 67 ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ ದಿನಸಿ ಕಿಟ್ ನೀಡಿದ್ದು, ಲಾಕ್‌ಡೌನ್‌ ವಿಸ್ತರಣೆಯಾಗಿರುವುದರಿಂದ ಮತ್ತೆ ದಿನಸಿ ಕಿಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ರವಿ ಮಾಹಿತಿ ನೀಡಿದರು.

65 ಟನ್ ಹಣ್ಣು-ತರಕಾರಿ ವಿತರಣೆ
ರೈತರು ಬೆಳೆದ ಹಣ್ಣು-ತರಕಾರಿಗಳನ್ನು ಮಾರಾಟಮಾಡಲು ಸಾರಿಗೆ ಸಮಸ್ಯೆಯ ಜೊತೆಗೆ ಸೂಕ್ತ ಮಾರುಕಟ್ಟೆಯೂ ಇಲ್ಲದ ಕಾರಣ, ರೈತರು ತೊಂದರೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ರೈತರ ನೆರವಿಗೆ ನಿಂತ ಅವರು, ತೋಟಗಳಿಗೆ ಭೇಟಿ ನೀಡಿ, ದ್ರಾಕ್ಷಿ, ಸೀಬೆ ಹಣ್ಣು, ಟೊಮೆಟೊ, ಕುಂಬಳಕಾಯಿ, ಕೋಸು ಸೇರಿದಂತೆ 65 ಟನ್‌ಗಳಷ್ಟು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ್ದಾರೆ.

ಸಿ.ಎಂ ಪರಿಹಾರ ನಿಧಿಗೆ ₹3 ಕೋಟಿ ದೇಣಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರವಿ ಅಧಿಕಾರ ವಹಿಸಿಕೊಂಡು ಕೇವಲ ಎರಡೂವರೆ ತಿಂಗಳು ಕಳೆದಿದ್ದು, ಕೊರೊನಾ ಸೋಂಕಿನ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹3 ಕೋಟಿ ದೇಣಿಗೆ ನೀಡಿದ್ದಾರೆ.

ಉಚಿತ ಔಷಧಿ ವಿತರಣೆ ದೊಡ್ಡಬೊಮ್ಮಸಂದ್ರ ವಾರ್ಡ್‌ ವ್ಯಾಪ್ತಿಯ ರಾಮಚಂದ್ರಪುರದ ಕೊಳಚೆ ಪ್ರದೇಶಗಳಿಗೆ ಹಾಗೂ ಕುವೆಂಪುನಗರ ವಾರ್ಡ್‌ ಬಡಾವಣೆಗಳಲ್ಲಿ ಮನೆಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ಕಾಯಿಲೆಗಳಿಗೆ ಉಚಿತವಾಗಿ ಔಷಧಿ ವಿತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT