ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ–20 ಒಕ್ಕೂಟ: ಬೆಂಗಳೂರಿಗೆ ಸ್ಥಾನ

ಜಾಗತಿಕ ಆರ್ಥಿಕ ವೇದಿಕೆ ರೂಪಿಸಿರುವ ಜಿ–20 ಗ್ಲೋಬಲ್ ಸ್ಮಾ್ರ್ಟ್ ಸಿಟೀಸ್ ಅಲಯನ್ಸ್‌ಗೆ ಆಯ್ಕೆ
Last Updated 28 ನವೆಂಬರ್ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಆರ್ಥಿಕ ವೇದಿಕೆ(ವರ್ಲ್ಡ್‌ ಎಕನಾಮಿಕ್‌ ಫೋರಮ್‌) ರೂಪಿಸಿರುವ ‘ಜಿ–20 ಗ್ಲೋಬಲ್ ಸ್ಮಾರ್ಟ್‌ ಸಿಟೀಸ್‌ ಅಲಯನ್ಸ್‌’ಗೆ ಬೆಂಗಳೂರು ನಗರವೂ ಆಯ್ಕೆಯಾಗಿದೆ.

ಈ ಒಕ್ಕೂಟ ಸೇರುವ ಒಪ್ಪಂದಕ್ಕೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್‌ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಸಹಿ ಹಾಕಿದ್ದಾರೆ.

ಜಾಗತಿಕ ಆರ್ಥಿಕ ವೇದಿಕೆಯು ಜಗತ್ತಿನ 36 ಮುಂಚೂಣಿ ನಗರಗಳನ್ನು ಈ ಒಕ್ಕೂಟಕ್ಕೆ ಆಯ್ಕೆ ಮಾಡಿದ್ದು, ಬೆಂಗಳೂರಿನ ಜೊತೆ ನಮ್ಮ ದೇಶದ ಹೈದರಾಬಾದ್‌, ಫರಿದಾಬಾದ್‌ ಹಾಗೂ ಇಂದೋರ್‌ ನಗರಗಳೂ ಸ್ಥಾನ ಪಡೆದಿವೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ಜಗತ್ತಿನ ಪ್ರಮುಖ ನಗರಗಳು ಆರ್ಥಿಕ ಮುಗ್ಗಟ್ಟು ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಸೀಮಿತ ಸಂಪನ್ಮೂಲದ ನಡುವೆಯೂ ಈ ರೋಗ ನಿಯಂತ್ರಣಕ್ಕೆ ಹೆಣಗಾಡುತ್ತಿವೆ. ಪರಿಸ್ಥಿತಿ ನಿಭಾಯಿಸಲು, ಮತ್ತೆ ಚೇತರಿಸಿಕೊಳ್ಳಲು ಹಾಗೂ ಹಿಂದಿಗಿಂತಲೂ ಹೆಚ್ಚು ಪ್ರತಿಕ್ರಿಯಾತ್ಮಕವಾಗಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಲು ದತ್ತಾಂಶ, ಹೊಸ ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಹೊಸಹೊಸ ತಂತ್ರಜ್ಞಾನಗಳ ಬಳಕೆ ಮೂಲಕ ಸ್ಮಾರ್ಟ್‌ ನಗರಗಳನ್ನು ರೂಪಿಸುವುದಕ್ಕೆ ಮೇಲ್ಪಂಕ್ತಿ ಹಾಕಿ ಕೊಡಲು ಈ ಒಕ್ಕೂಟ ಶ್ರಮಿಸಲಿದೆ. ಇದರ ಸದಸ್ಯತ್ವ ಪಡೆದ ನಗರಗಳು ಪರಸ್ಪರ ವಿಚಾರ ವಿನಿಮಯ ನಡೆಸಲು ನೆರವಾಗುವ ಉದ್ದೇಶದಿಂದ ಈ ಒಕ್ಕೂಟ ವನ್ನು ರಚಿಸಲಾಗಿದೆ ಎಂದು ಜಾಗತಿಕ ಆರ್ಥಿಕ ವೇದಿಕೆ ಹೇಳಿದೆ.

ಖಾಸಗಿತನ ಕಾಪಾಡುವ ನೀತಿಗಳು, ಉತ್ತಮ ಬ್ರಾಂಡ್‌ಬ್ಯಾಂಡ್ ಸೌಕರ್ಯ, ಸೈಬರ್‌ ಸುರಕ್ಷತೆಯ ಹೊಣೆಗಾರಿಕೆ, ನಗರಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶಗಳ ಮುಕ್ತ ಲಭ್ಯತೆ ಅವಕಾಶ ಹೆಚ್ಚಿಸುವುದು, ವೃದ್ಧರಿಗೆ ಹಾಗೂ ಅಂಗವಿಕಲರೂ ಸೇರಿದಂತೆ ಎಲ್ಲರಿಗೂ ಡಿಜಿಟಲ್‌ ಸೇವೆಗಳ ಲಭ್ಯತೆ ಹೆಚ್ಚಿಸುವುದು... ಮುಂತಾದ ವಿಚಾರ ಗಳನ್ನು ಈ ಒಕ್ಕೂಟದ ಮುಂಚೂಣಿ ನಗರಗಳು, ಪರಸ್ಪರ ಹಂಚಿಕೊಳ್ಳಲಿವೆ.

‘ಒಕ್ಕೂಟದ ಭಾಗವಾಗಿರುವುದು ಬೆಂಗಳೂರಿನ ಪಾಲಿಗೆ ಸಿಕ್ಕ ಸದವಕಾಶ. ಇದರಿಂದ ನಗರದ ಅನೇಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಜಗತ್ತಿನ ಮುಂಚೂಣಿ ನಗರಗಳಿಂದ ತಂತ್ರಜ್ಞಾನದ ನೆರವು ಪಡೆಯುವುದು ಸುಲಭವಾಗಲಿದೆ’ ಎಂದು ಬಿಬಿಎಂಪಿ ಆಯುಕ್ತ
ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಬಳಿಕ ತಂತ್ರಜ್ಞಾನ ಬಳಸುವ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಉದಾಹರಣೆಗೆ, ಕೋವಿಡ್‌ ಕಾಣಿಸಿಕೊಳ್ಳುವ ಮುನ್ನವೂ ವರ್ಚುವಲ್‌ ಸಭೆಗಳನ್ನು ನಡೆಸುವ ತಂತ್ರಜ್ಞಾನ ಲಭ್ಯವಿತ್ತಾದರೂ ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ಈಗ ಸರ್ಕಾರದ ಬಹುತೇಕ ಸಭೆಗಳು ವರ್ಚುವಲ್‌ ರೂಪದಲ್ಲೇ ನಡೆಯುತ್ತಿವೆ. ಇದರಲ್ಲಿ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಅಂಶಗಳೂ ಇವೆ. ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವಾಗ ಮುಂಚೂಣಿ ನಗರಗಳ ಜೊತೆ ಸಹಭಾಗಿತ್ವ ಹೊಂದಲು ಹಾಗೂ ಪರಸ್ಪರ ಒಳಿತು ಕೆಡುಕುಗಳ ಬಗ್ಗೆ ಸಮಾಲೋಚಿಸಲು ಈ ಒಕ್ಕೂಟ ನೆರವಿಗೆ ಬರಲಿದೆ. ನಮ್ಮ ನೀತಿಗಳಲ್ಲಿನ ಲೋಪ ಸರಿಪಡಿಸಿ ಉತ್ತಮ ಆಡಳಿತ ವ್ಯವಸ್ಥೆ ರೂಪಿಸುವಲ್ಲೂ ಇದು ಸಹಕಾರಿ’ ಎಂದು ಅವರು ಅಭಿಪ್ರಾಯಪಟ್ಟರು.

ನೀತಿ ನಿರೂಪಣೆಯ ಮಾದರಿ ಚೌಕಟ್ಟು
ಮಾಹಿತಿ ಮತ್ತು ಸಂವಹನತಂತ್ರಜ್ಞಾನ ಲಭ್ಯತೆ: ಡಿಜಿಟಲ್ ಸೇವೆಗಳು ಅಂಗವಿಕಲರು ವೃದ್ಧರಾದಿಯಾಗಿ ಎಲ್ಲರಿಗೂ ಸುಲಭವಾಗಿ ದಕ್ಕುವಂತೆ ಸೌಕರ್ಯ ರೂಪಿಸುವುದು
ಸೈಬರ್‌ ಸುರಕ್ಷತೆಯ ಮಾದರಿ:ನಗರದ ಹಾಗೂ ನಾಗರಿಕದ ಸ್ವತ್ತುಗಳ ರಕ್ಷಣೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡ ಹಾಗೂ ಹೊಣೆಗಾರಿಕೆಗಳನ್ನು ನಿರೂಪಿಸುವುದು
ಮುಕ್ತ ದತ್ತಾಂಶ ನೀತಿ: ನಗರದ ಪ್ರಮುಖ ದತ್ತಾಂಶಗಳು ಎಲ್ಲರಿಗೂ ಲಭಿಸುವಂತೆ ಮಾದರಿ ನೀತಿ ರೂಪಿಸುವುದು
ಖಾಸಗಿತನದ ಮೇಲಿನ ಪರಿಣಾಮದ ವಿಶ್ಲೇಷಣೆ:ನಗರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಾಗ ಅದರಿಂದ ಖಾಸಗಿತದ ಮೇಲಾಗುವ ಪರಿಣಾಮಗಳ ವಿಶ್ಲೇಷಣಾ ಕ್ರಮಗಳನ್ನು ನಿರೂಪಿಸುವುದು
ಡಿಜಿಟಲ್‌ ಮೂಲಸೌಕರ್ಯ: ನಗರದಲ್ಲಿ ಡಿಜಿಟಲ್‌ ಮೂಲಸೌಕರ್ಯದ ವೆಚ್ಚ ಕಡಿತಕ್ಕೆ ಹಾಗೂ ಅಭಿವೃದ್ಧಿಯ ಪಾಲುದಾರರ ನಡುವಿನ ಸಮನ್ವಯಕ್ಕೆ ನೀತಿ ರೂಪಿಸುವುದು
ದತ್ತಾಂಶಗಳ ಒಪ್ಪಂದದ ಷರತ್ತುಗಳು: ದತ್ತಾಂಶಗಳ ಮಾಲೀಕತ್ವಕ್ಕೆ ಷರತ್ತು ರೂಪಿಸುವುದು

ಆಯ್ಕೆಯಾದ ನಗರಗಳಿಗೆ ಏನುಪಯೋಗ?
*
20ಕ್ಕೂ ಅಧಿಕ ಸ್ಮಾರ್ಟ್‌ ಸಿಟಿ ಸಂಸ್ಥೆಗಳು ಹಾಗೂ ಒಕ್ಕೂಟದ ಸದಸ್ಯತ್ವ ಪಡೆದ ನಗರಗಳ ಜಾಲದೊಂದಿಗೆ ಸಂಪರ್ಕ
*ನಿಷ್ಪಕ್ಷಪಾತದ ಸಲಹೆಗಳನ್ನು ಪಡೆಯಬಹುದು. ಆಡಳಿತ ನೀತಿಗಳ ಪ್ರಾಯೋಗಿಕ ವಿಶ್ಲೇಷಣೆ ಸಾಧ್ಯವಾಗಲಿದೆ. ತಂತ್ರಜ್ಞಾನ ಆಧರಿತ ಆಡಳಿತದಲ್ಲಿ ತ್ವರಿತವಾಗಿ ಪಕ್ವತೆ ಸಾಧಿಸಲು ನೆರವಾಗಲಿದೆ.
*ಹೊಸ ಯೋಜನೆಗಳ ಪ್ರಾಯೋಗಿಕ ಅನುಷ್ಠಾನದ ಅವಕಾಶ ಲಭಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಜಾಗತಿಕ ದರ್ಜೆಯ ಸಂಸ್ಥೆಗಳಸಹಭಾಗಿತ್ವಕ್ಕೆ ಇದು ವೇದಿಕೆ ಕಲ್ಪಿಸಲಿದೆ.
*ಸ್ಮಾರ್ಟ್‌ ಸಿಟಿಗಳಿಗೆ ಜಾಗತಿಕ ಮನ್ನಣೆ ಲಭಿಸಲಿದೆ

ಆಡಳಿತ ನೀತಿ ಸುಧಾರಣೆ
ಜಿ–20 ಒಕ್ಕೂಟದ ಮುಂಚೂಣಿ ನಗರಗಳು ತಮ್ಮಲ್ಲಿನ ಆಡಳಿತ ನೀತಿಗಳ ಲೋಪಗಳನ್ನು ಪತ್ತೆ ಹಚ್ಚಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಒಕ್ಕೂಟವು ಒಂದು ಮಾದರಿ ಚೌಕಟ್ಟನ್ನು ರೂಪಿಸಿದೆ. ಬೆಂಗಳೂರು ನಗರದಲ್ಲೂ ಮಾದರಿ ನೀತಿ ಅಳವಡಿಕೆ ಕುರಿತ ಅಧ್ಯಯನಕ್ಕೆ ಮೂವರು ಸದಸ್ಯರ ತಂಡ ರಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT