ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಗಣೇಶನಿಗೆ ಜನರ ಸಾಥ್: ಗಿನ್ನಿಸ್ ದಾಖಲೆ ನಿರ್ಮಾಣ

‘ಹಸಿರು ಗಣಪ, ಬೀಜ ಗಣಪ’ ಅಭಿಯಾನಕ್ಕೆ ಉತ್ತಮ ಸ್ಪಂದನೆ
Last Updated 28 ಆಗಸ್ಟ್ 2022, 20:53 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು, ವೃದ್ಧರು ಸೇರಿ ಎಲ್ಲ ವಯೋಮಾನದವರೂ ಉತ್ಸಾಹದಿಂದ ಜೇಡಿಮಣ್ಣಿನಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿ ಹಬ್ಬದ ಆಶಯಕ್ಕೆ ಸಾಥ್ ನೀಡಿದರು.

ಇದರಿಂದಾಗಿ ‘ಹಸಿರು ಗಣಪ ಬೀಜ ಗಣಪ’ ಅಭಿಯಾನದಡಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ‘ಗಿನ್ನಿಸ್’ ದಾಖಲೆ ನಿರ್ಮಾಣಕ್ಕೆ ನೆರವಾದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಶ್ರೀ ವಿದ್ಯಾರಣ್ಯ ಯುವಕರ ಸಂಘ ಜಂಟಿಯಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 3,800 ವಿಗ್ರಹ ನಿರ್ಮಾಣದ ಮೂಲಕ ನೂತನ ದಾಖಲೆ ನಿರ್ಮಾಣವಾಯಿತು.

ನಗರದ ವಿವಿಧೆಡೆಯಿಂದ ಕುಟುಂಬ ಸಮೇತರಾಗಿ ಬಂದ ಜನರು, ಕಲಾವಿದರ ಮಾರ್ಗದರ್ಶನದಲ್ಲಿ ಹಸಿರು ಗಣೇಶ ಮೂರ್ತಿಗಳನ್ನು ತಯಾರಿಸಿದರು.

ಜನರಿಗೆ ಟಿ ಶರ್ಟ್, ವಿಗ್ರಹ ನಿರ್ಮಾಣಕ್ಕೆ ಜೇಡಿಮಣ್ಣಿನೊಂದಿಗೆ ವಿವಿಧ ಹೂವು ಹಾಗೂ ಔಷಧ ಗಿಡಗಳ ಬೀಜಗಳನ್ನು ವಿತರಿಸಲಾಯಿತು. ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.

ಗಿನ್ನಿಸ್ ದಾಖಲೆ ಪ್ರಯತ್ನವನ್ನು ವೀಕ್ಷಿಸಿದ ನಿರ್ಣಾಯಕರ ತಂಡ, ಮೂರ್ತಿಗಳ ನಿರ್ಮಾಣದ ಬಳಿಕ ನೂತನ ದಾಖಲೆ
ನಿರ್ಮಾಣ ಆಗಿರುವುದಾಗಿ ಘೋಷಿಸಿದರು. ಪ್ರಮಾಣ ಪತ್ರವನ್ನುಕೆಎಸ್‌ಪಿಸಿಬಿ ಹಾಗೂ ಶ್ರೀ ವಿದ್ಯಾರಣ್ಯ ಯುವಕರ ಸಂಘದ ಪ್ರತಿನಿಧಿಗಳಿಗೆ ಅವರು ಹಸ್ತಾಂತರಿಸಿತು.

‘ಈ ಹಿಂದೆ 2,138 ವಿಗ್ರಹಗಳನ್ನು ಒಂದೆಡೆ ತಯಾರಿಸಲಾಗಿತ್ತು. ಈಗ ನೂತನ ದಾಖಲೆ ನಿರ್ಮಾಣವಾಗಿದೆ’ ಎಂದು ನಿರ್ಣಾಯಕರು ತಿಳಿಸಿದರು.

‘ಈಅಭಿಯಾನದಲ್ಲಿ ತಯಾರಿಸಲಾಗುವ ಮೂರ್ತಿಗಳನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ‘ಗಣೇಶ ಚತುರ್ಥಿ’ ಯಂದು ಪ್ರತಿಷ್ಠಾಪಿಸಿ, ಬಳಿಕ ಪರಿಸರಸ್ನೇಹಿಯಾದ ಕ್ರಮದಲ್ಲಿಯೇ ಮಣ್ಣಿನ ಕುಂಡಗಳಲ್ಲಿ ಮೂರ್ತಿಯನ್ನು ವಿಸರ್ಜಿಸಬೇಕು’ ಎಂದು ಆಯೋಜಕರು ಮನವಿ ಮಾಡಿಕೊಂಡರು.

ಕೆಎಸ್‌ಪಿಸಿಬಿ ಕಳೆದ ವರ್ಷ 10 ಲಕ್ಷ ಅರಿಸಿನ ಗಣೇಶ ನಿರ್ಮಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಅಲ್ಲದೆ, ಅರಿಸಿನ ಗಣಪತಿ ತಯಾರಿಕೆ ಮತ್ತು ಅದರ ಮಹತ್ವವನ್ನು ಕುರಿತು ಅರಿವು ಮೂಡಿಸಲು ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೊ ಅನ್ನು ಕಳೆದ ವರ್ಷ ಒಂದು ಕೋಟಿ ಜನರು ವೀಕ್ಷಣೆ ಮಾಡಿದ್ದರು.

ಗಣೇಶೋತ್ಸವ: ಸೂಕ್ಷ್ಮ ಪ್ರದೇಶದಲ್ಲಿ 24 ಗಂಟೆ ಭದ್ರತೆ
ಬೆಂಗಳೂರು
: ನಗರದಲ್ಲಿ ಗಣೇಶೋತ್ಸವ ಆಚರಣೆಗೆ ದಿನಗಣನೆ ಶುರುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಚಾಮರಾಜಪೇಟೆ ಮೈದಾನ ಹಾಗೂ ಇತರೆ ವಿವಾದಿತ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇಂಥ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಮಾಹಿತಿ ಇರುವುದರಿಂದ, ಭದ್ರತೆ ಬಿಗಿಗೊಳಿಸಲು ಕಮಿಷನರ್ ಪ್ರತಾಪ್ ರೆಡ್ಡಿ ಅವರು ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಪ್ರತಿ ಸ್ಥಳದಲ್ಲೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ‘ಚಾಮರಾಜಪೇಟೆ, ಪಾದರಾಯನಪುರ, ಚಂದ್ರಾಲೇಔಟ್, ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ), ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ), ಗೋವಿಂದಪುರ ಪ್ರದೇಶಗಳನ್ನು ಅತೀ ಸೂಕ್ಷ್ಮವೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಪೊಲೀಸರು ಮೂರು ಪಾಳಿಯಲ್ಲಿ ಗಸ್ತು ತಿರುಗಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ಮೂರ್ತಿ ಮೆರವಣಿಗೆ ಸಾಗುವ ರಸ್ತೆಗಳ ಪಟ್ಟಿ ಮಾಡಲಾಗಿದೆ. ಈ ಭಾಗದಲ್ಲಿರುವ ಪ್ರಾರ್ಥನಾ ಮಂದಿರಗಳಿಗೂ ಭದ್ರತೆ ನೀಡಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT