ಬೆಂಗಳೂರು: ಮಲ್ಲೇಶ್ವರದ ಎಂಟನೇ ಅಡ್ಡರಸ್ತೆಯಲ್ಲಿ ಇನ್ನೂ ಸಂಪರ್ಕ ನೀಡದ ಗ್ಯಾಸ್ಪೈಪ್ ಒಡೆದು ಮಂಗಳವಾರ ರಾತ್ರಿ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು.
ಖಾಸಗಿ ಕಂಪನಿಯೊಂದು ಇಲ್ಲಿ ಗ್ಯಾಸ್ ಪೈಪ್ಲೈನ್ ಸಂಪರ್ಕ ಕಲ್ಪಿಸಲು ರಸ್ತೆ ಅಗೆಯುವ ಕಾಮಗಾರಿ ನಡೆಸುತ್ತಿದೆ. ಆಗ ಅಳವಡಿಸಲಾಗಿದ್ದ ಗ್ಯಾಸ್ ಪೈಪ್ ಲೈನ್ ಒಡೆದು ಅದರಲ್ಲಿದ್ದ ಗಾಳಿ ಹೊರಬಂದಿದ್ದು, ಸ್ಥಳಿಯರು ಆತಂಕಗೊಂಡಿದ್ದರು. ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು.
ಸ್ಥಳಕ್ಕೆ ಬಂದ ಗ್ಯಾಸ್ ಪೈಪ್ ಸಂಪರ್ಕ ಕಲ್ಪಿಸುವ ಸಿಬ್ಬಂದಿ ಪರಿಶೀಲನೆ ನಡೆಸಿ ಪೈಪ್ ಮುಚ್ಚಿದ್ದಾರೆ. ಅನಿಲ ಸಂಪರ್ಕ ಇನ್ನೂ ನೀಡದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮಲ್ಲೇಶ್ವರಂ ಠಾಣೆ ಪೊಲೀಸರು ತಿಳಿಸಿದರು.