ಬೆಂಗಳೂರು: ಖಾಸಗಿ ಟ್ಯಾಕ್ಸಿಗೆ ಅಳವಡಿಸಿದ್ದ ಸರ್ಕಾರಿ ಲಾಂಛನವನ್ನು ತೆರವುಗೊಳಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಚಾಲಕನಿಗೆ ನೋಟಿಸ್ ನೀಡಿದರು.
ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದ ಹೆಚ್ಚುವರಿ ಮಹಾನಿರ್ದೇಶಕ ರಾಜಕುಮಾರ್ ಉಪಾದ್ಯಾಯ ಅವರು ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಗೆ ಅಳವಡಿಸಿದ್ದ ಫಲಕದಲ್ಲಿ ಕೇಂದ್ರ ಸರ್ಕಾರದ ಲಾಂಛನವೂ ಇತ್ತು.
ಮಾಹಿತಿ ಆಧರಿಸಿ ದೂರದರ್ಶನದ ಕಚೇರಿ ಆವರಣಕ್ಕೆ ತೆರಳಿದ ಸಾರಿಗೆ ಇಲಾಖೆ ಯಶವಂತಪುರ ವಲಯದ ಮೋಟಾರು ವಾಹನ ಹಿರಿಯ ನಿರೀಕ್ಷಕ ರಾಜಣ್ಣ, ಫಲಕ ತೆರವುಗೊಳಿಸಿದರು. ನಂತರ ಚಾಲಕನಿಗೆ ನೋಟಿಸ್ ನೀಡಿದರು.
‘ಸ್ಥಳಕ್ಕೆ ಬಂದ ರಾಜಕುಮಾರ್ ಉಪಾದ್ಯಾಯ, ಫಲಕ ಅಳವಡಿಸಲು ನಾನೇ ಅನುಮತಿ ನೀಡಿದ್ದೇನೆ ಎಂದರು. ಆದರೆ ಖಾಸಗಿ ವಾಹನಗಳಿಗೆ ಸರ್ಕಾರದ ಲಾಂಛನ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮನವರಿಕೆ ಮಾಡಲಾಯಿತು’ ಎಂದು ರಾಜಣ್ಣ ತಿಳಿಸಿದರು.