ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಗೂ ಹೊರವಲಯದ ಸುತ್ತಮುತ್ತ ರಸ್ತೆ, ಖಾಲಿ ನಿವೇಶನಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಸಿದೆ.
ಪಾಲಿಕೆಯ ವ್ಯಾಪ್ತಿಯ ಹೊರಗಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಯಲ್ಲಿ ಅನಾಮಧೇಯ ವ್ಯಕ್ತಿಗಳಿಂದ, ಏಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಅನಧಿಕೃತವಾಗಿ ವಿಲೇವಾರಿಯಾಗುತ್ತಿದೆ. ಇದು ನಗರದ ಘನತೆಗೆ ಕುಂದು ತರುತ್ತಿದೆ. ಆದ್ದರಿಂದ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಅನುಪಾಲನಾ ಕ್ರಮಗಳನ್ನು ಹೊರಡಿಸಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಆರ್. ಪ್ರತಿಭಾ ತಿಳಿಸಿದ್ದಾರೆ.
ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ವೈಜ್ಞಾನಿಕ ಅಧಿಕೃತ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಯ ಪ್ರಾಥಮಿಕ ಜವಾಬ್ದಾರಿ ತ್ಯಾಜ್ಯ ಉತ್ಪಾದಕರದ್ದು.
ಕಟ್ಟಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಅಧಿಕೃತವಾಗಿ ಗುರುತಿಸಿದ ಸಂಸ್ಕರಣ ಘಟಕಗಳಿಗೆ ಸಾಗಿಸಬೇಕು.
ಕಟ್ಟಡ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆಗಳ ಬದಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು-2016ರನ್ವಯ ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧ.
ಕಟ್ಟಡ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ತ್ಯಾಜ್ಯ ಉತ್ಪಾದಕರನ್ನೊಳಗೊಂಡಂತೆ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ/ವಿಲೇವಾರಿದಾರರಿಗೂ ನಿಯಮಾವಳಿಗಳನ್ವಯ (ಪ್ರತಿ ಟನ್ಗೆ ₹10 ಸಾವಿರ) ದಂಡವನ್ನು ವಿಧಿಸಲಾಗುವುದು. ಪರಿಸರ (ಸಂರಕ್ಷಣೆ) ಕಾಯ್ದೆ 1986ರನ್ವಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನಗರದ ಹೊರವಲಯದಲ್ಲಿ ಕಟ್ಟಡ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ಸಂಚರಿಸುವ ಎಲ್ಲಾ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್ ಮಾರ್ಷಲ್ಸ್, ಮಾರ್ಷಲ್ ಸೂಪರವೈಸರ್ ತಪಾಸಣೆ ಮಾಡಬೇಕು. ನಿಯಮಾನುಸಾರ ದಂಡ ವಿಧಿಸಿ, ವಾಹನಗಳನ್ನು ವಶಪಡಿಸಿಕೊಂಡು ಹತ್ತಿರದ ಪೋಲಿಸ್ ಠಾಣೆಯ ಸುಪರ್ದಿಗೆ ನೀಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.