ಬೆಂಗಳೂರು:‘ವಿಜ್ಞಾನಕ್ಕಾಗಿ ಭಾರತ ನಡಿಗೆ’ ಕಾರ್ಯಕ್ರಮದ ಮೂರನೇ ಆವೃತ್ತಿಯ ಕಾರ್ಯಕ್ರಮ ನಗರದಲ್ಲಿ ಶನಿವಾರ ನಡೆಯಿತು.
ಬನ್ನಪ್ಪ ಪಾರ್ಕ್ನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನವರೆಗೆ ಸಾಗಿದ ಈ ನಡಿಗೆಗೆ ಕುಲಸಚಿವ ವಿ. ಶಿವರಾಂ ಚಾಲನೆ ನೀಡಿದರು.
ಜನಹಿತವನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಸರ್ಕಾರಗಳು ನೀತಿ ರೂಪಿಸಬೇಕು. ಸಂಶೋಧನಾ ಕಾರ್ಯ ಗಳಿಗೆ ಸಮರ್ಪಕವಾಗಿ ಅನುದಾನ ಒದಗಿಸಬೇಕು ಎಂದು ನಡಿಗೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಒತ್ತಾಯಿಸಿದರು.
ಕುಲಪತಿ ಪ್ರೊ. ಎಸ್. ಜಾಫೆಟ್, ‘ವೈಜ್ಞಾನಿಕ ಚಿಂತನೆಗಳು ನಮ್ಮ ಸಂವಿಧಾನದ ಭಾಗ ಮಾತ್ರವಲ್ಲ, ಅವು ನಮ್ಮ ಜೀವನದ ಭಾಗವೂ ಆಗಬೇಕು’ ಎಂದರು.
ಖಭೌತ ವಿಜ್ಞಾನಿ ಪ್ರಜ್ವಲ ಶಾಸ್ತ್ರಿ, ‘ಅನೇಕ ವಿಜ್ಞಾನಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿರು ವುದಿಲ್ಲ. ಸಂಸ್ಥೆಯೊಂದು ವಿಜ್ಞಾನಿಗಳನ್ನು ನೇಮಿಸಿಕೊಳ್ಳುವಾಗ, ಅವರು ವೈಜ್ಞಾನಿಕ ಯೋಚನಾ ವಿಧಾನವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕಾದ ಅಗತ್ಯವಿದೆ’ ಎಂದರು.
‘ಧರ್ಮವು ನಮ್ಮ ಮತ್ತು ಸುತ್ತಲಿನ ಮನುಷ್ಯರೊಂದಿಗಿನ ಪರಸ್ಪರ ಸಂಬಂಧಗಳ ಬಗ್ಗೆ ತಿಳಿಸುವ ಸಾಧನ ವಾಗಬಹುದೇ ಹೊರತು, ನಮ್ಮ ಸುತ್ತಲಿನ ವಿದ್ಯಮಾನಗಳ ಕಾರಣ ಹುಡುಕುವ ಅಥವಾ ಅದಕ್ಕೆ ಪರಿಹಾರ ನೀಡುವ ಸಾಧನವಾಗಲಾರದು’ ಎಂದು ಅಭಿಪ್ರಾಯಪಟ್ಟರು.
ನೀರಿನ ಕೊರತೆ ಮತ್ತು ವೈಜ್ಞಾನಿಕ ಪರಿಹಾರ ಕುರಿತು ಮಾತನಾಡಿದ ಪ್ರೊ.ಭಕ್ತಿದೇವಿ, ‘ನೀರಿನ ಹೊಸ ಮೂಲಗಳ ಅನ್ವೇಷಣೆಯ ಬದ ಲಾಗಿ, ಇರುವ ನೀರನ್ನೇ ಮರುಬಳಕೆ ಯೋಗ್ಯವನ್ನಾಗಿಸುವ ಆವಿಷ್ಕಾರಗಳಿಗೆ ವಿಜ್ಞಾನಿಗಳು ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.
ಜಲಸಂರಕ್ಷಣಾ ತಜ್ಞ ಎಸ್. ವಿಶ್ವನಾಥ್, ‘ನೀರನ್ನು ಒಂದು ಖಾಸಗಿ ಆಸ್ತಿಯನ್ನಾಗಿ ನೋಡದೆ, ಸಾರ್ವಜನಿಕ ಆಸ್ತಿಯನ್ನಾಗಿಸಬೇಕು’ ಎಂದರು.