ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಅವೈಜ್ಞಾನಿಕ ರಸ್ತೆ ಉಬ್ಬು, ಬೆಳಗದ ಬೀದಿ ದೀಪ

Published 8 ಜೂನ್ 2023, 3:23 IST
Last Updated 8 ಜೂನ್ 2023, 3:23 IST
ಅಕ್ಷರ ಗಾತ್ರ

ಬೆಂಗಳೂರು: ಕನಕಪುರ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು (ಹಂಪ್ಸ್) ರಸ್ತೆ ಅಪಘಾತಕ್ಕೆ ಕಾರಣವಾದರೆ, ಕೆಟ್ಟುಹೋದ ಬೀದಿ ದೀಪಗಳು ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. 

ಕೋಣನಕುಂಟೆ ವೃತ್ತದಿಂದ ಬನಶಂಕರಿವರೆಗೂ ವೇಗ ತಡೆಗೆ ಹಲವು ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ಮೇಲೆ ಕಪ್ಪು, ಬಿಳಿ ಹಾಗೂ ಕತ್ತಲಿನಲ್ಲಿ ಸ್ವಯಂ ಪ್ರತಿಫಲನಗೊಳ್ಳುವ ಪಟ್ಟಿ ಇಲ್ಲ. 40 ಮೀಟರ್‌ಗೂ ಮೊದಲೇ ರಸ್ತೆ ಉಬ್ಬು ಇರುವ ಬಗ್ಗೆ ಎಚ್ಚರಿಕೆಯ ಫಲಕವನ್ನೂ ರಸ್ತೆ ಪಕ್ಕದಲ್ಲಿ ಅಳವಡಿಸಿಲ್ಲ. ಇದರಿಂದಾಗಿ ರಾತ್ರಿಯ ವೇಳೆ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಆರ್‌ಎಂಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ಎದುರು ರಾತ್ರಿ ಅವಧಿಯಲ್ಲಿ ಹೆಚ್ಚಾಗಿ ರಸ್ತೆ ಅಪಘಾತಗಳಾಗುತ್ತಿವೆ. 

ಕನಕಪುರ ರಸ್ತೆಯು ನಗರದ ಕೋಣನಕುಂಟೆ, ಜೆಪಿ ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ತಲಘಟ್ಟಪುರ, ಅಂಜನಾಪುರ ಸೇರಿ ವಿವಿಧ ಪ್ರದೇಶಗಳಿಗೆ ಸಂಪರ್ಕ ಸಾಧಿಸಲಿದೆ. ಫೋರಂ ಸೇರಿ ವಿವಿಧ ಮಾಲ್ ಹಾಗೂ ಮಳಿಗೆಗಳು ಈ ರಸ್ತೆಗೆ ಹೊಂದಿಕೊಂಡು ತಲೆಯೆತ್ತಿವೆ. ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಅಪಾರ್ಟ್‌ಮೆಂಟ್ ಸಮುಚ್ಚಯಗಳೂ ಇವೆ. ಇದರಿಂದಾಗಿ ಈ ರಸ್ತೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಹನ ಸಂಚಾರ ಹೆಚ್ಚಿದೆ. ವಾರಾಂತ್ಯದಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಕೋಣನಕುಂಟೆ ಸೇರಿ ವಿವಿಧೆಡೆ ಬೀದಿ ದೀಪಗಳು ಕೆಟ್ಟು ಹಲವು ದಿನಗಳಾದರೂ ಸರಿಪಡಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಣನಕುಂಟೆ ವೃತ್ತ ಸೇರಿ ವಿವಿಧೆಡೆ ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿಯೇ ನಿರ್ಮಿಸಲಾಗಿದೆ. ರಸ್ತೆ ಅಪಘಾತಗಳು ನಡೆಯುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿಲ್ಲ.
ಡಿ. ಮಹದೇವ್, ಬೆಂಗಳೂ ದಕ್ಷಿಣ ಉಪವಿಭಾಗದ (ಸಂಚಾರ) ಎಸಿಪಿ

ಕಾರ್ಯಾಚರಣೆ ಮಾಡದ ಸಿಗ್ನಲ್: ಆರ್‌ಎಂಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ಎದುರು ಚುನಾವಣೆ ಪೂರ್ವವೇ ಪಾದಚಾರಿಗಳಿಗಾಗಿ ಪ್ರತ್ಯೇಕ ಸಿಗ್ನಲ್ ಅಳವಡಿಕೆ ಮಾಡಲಾಗಿತ್ತು. ಈ ವ್ಯವಸ್ಥೆ ವಿದೇಶದಲ್ಲಿದೆ. ರಸ್ತೆ ದಾಟುವವರು ದೀಪದ ಬಟನ್‌ ಒತ್ತಿ, ಸಾಗಬೇಕು. ಆದರೆ, ಈವರೆಗೂ ಆ ದೀಪಗಳು ಕಾರ್ಯಾಚರಣೆ ಪ್ರಾರಂಭಿಸಿಲ್ಲ. ಅಲ್ಲಿನ ಶಾಲೆ–ಕಾಲೇಜಿನಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳಿದ್ದಾರೆ. ಶಾಲಾ ಮಕ್ಕಳು ಹಾಗೂ ಅವರ ಪಾಲಕರು, ಪಾದಚಾರಿಗಳು ಭಯದಲ್ಲಿಯೇ ರಸ್ತೆ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೇ ರಸ್ತೆಯ ಇನ್ನೊಂದು ಕಡೆಯಿಂದ ತೆರಳುವ ವಾಹನಗಳಿಗೆ ತಿರುವು ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲಿ ಉಬ್ಬು ಅಳವಡಿಸಿಲ್ಲ. ಇದರಿಂದ ಯಲಚೇನಹಳ್ಳಿ ಕಡೆಯಿಂದ ಬರುವವರು ವೇಗವಾಗಿ ಬಂದು, ತಿರುವು ಪಡೆಯುತ್ತಿದ್ದಾರೆ. ಇದರಿಂದಲೂ ಅಪಘಾತಗಳು ಸಂಭವಿಸುತ್ತಿವೆ.

ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಸಮಸ್ಯೆ ಆಗುತ್ತಿದೆ. ಬೀದಿ ದೀಪಗಳು ಬೆಳಗದಿದ್ದರಿಂದ ರಾತ್ರಿ ವೇಳೆ ರಸ್ತೆ ಉಬ್ಬುಗಳು ಸಹ ಗೋಚರಿಸುತ್ತಿಲ್ಲ.
ನಾಗರಾಜ್ ಕಗ್ಗಲೀಪುರ

‘ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ಸಂಚಾರ ದುಸ್ತರವಾಗಿದೆ. ರಾತ್ರಿ ವೇಳೆ ವೇಗವಾಗಿ ವಾಹನಗಳು ಸಂಚರಿಸುತ್ತವೆ. ಬೀದಿ ದೀಪಗಳು ಸಹ ಸಮರ್ಪಕವಾಗಿ ಬೆಳಗುತ್ತಿಲ್ಲ. ಇದರಿಂದ ರಸ್ತೆ ಉಬ್ಬುಗಳು ಗೋಚರಿಸದೆ, ಪ್ರತಿ ವಾರ ದಿಚಕ್ರ ವಾಹನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತಿವೆ’ ಎಂದು ಮಳಿಗೆಯೊಂದರ ರಕ್ಷಣಾ ಸಿಬ್ಬಂದಿ ತಿಳಿಸಿದರು. 

ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ರಸ್ತೆ ಉಬ್ಬುಗಳಿಗೆ ಸ್ವಯಂ ಪ್ರತಿಫಲನಗೊಳ್ಳುವ ವರ್ಣ ಬಳಸಿ ಪಟ್ಟಿ ಬಳಿದಿಲ್ಲ.
ಮಹೇಶ್, ಆಟೊ ರಿಕ್ಷಾ ಚಾಲಕ

‘ರಸ್ತೆಯುದ್ದಕ್ಕೂ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದರಿಂದ ಸಂಚಾರ ಕಷ್ಟವಾಗುತ್ತಿದೆ. ರಸ್ತೆ ತಿರುವು ಪಡೆಯುವಾಗ ವೇಗ ಕಡಿತಗೊಳಿಸಲು ಉಬ್ಬುಗಳು ಅಗತ್ಯ. ಆದರೆ, ಅಂತಹ ಕಡೆ ಉಬ್ಬುಗಳನ್ನು ಅಳವಡಿಸಿಲ್ಲ’ ಎಂದು ವಿಜಯನಗರದ ಪಳನಿ ಬೇಸರ ವ್ಯಕ್ತಪಡಿಸಿದರು.

ಮಾನದಂಡ ಉಲ್ಲಂಘನೆ?

ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕಾಗುತ್ತದೆ. ಉಬ್ಬುಗಳು 17 ಮೀಟರ್ ವ್ಯಾಸ 3.7 ಮಿಟರ್ ಉದ್ದ 0.10 ಮೀಟರ್ ಎತ್ತರ ಹಾಗೂ ವಾಹನಗಳ ಚಕ್ರಗಳ ಅಗಲಕ್ಕಿಂತ ಹೆಚ್ಚಿಗೆ ಇರಬೇಕು. ಈ ಉಬ್ಬುಗಳ ಮೇಲೆ ಕಪ್ಪು ಬಿಳಿ ಹಾಗೂ ಕತ್ತಲಿನಲ್ಲಿ ಸ್ವಯಂ ಪ್ರತಿಫಲನಗೊಳ್ಳುವ ವರ್ಣ ಬಳಸಿ ಪಟ್ಟಿ ಬಳಿದಿರಬೇಕು. ರಾತ್ರಿಯಲ್ಲಿ ಸ್ಪಷ್ಟವಾಗಿ ಕಾಣಿಸುವ ಸಲುವಾಗಿ ಕ್ಯಾಟ್‍ ಐಗಳು ಇರಬೇಕು.

ವಾಹನಗಳು ವೇಗವಾಗಿ ಬರುವುದರಿಂದ ಮಕ್ಕಳೊಂದಿಗೆ ರಸ್ತೆ ದಾಟುವುದು ಕಷ್ಟವಾಗಿದೆ. ವಾಹನ ಸವಾರರಿಗೆ ರಸ್ತೆ ಉಬ್ಬುಗಳು ಗೋಚರಿಸುತ್ತಿಲ್ಲ
ಚೈತ್ರಾ ಯಲಚೇನಹಳ್ಳಿ

40 ಮೀಟರ್ ಮೊದಲೇ ಮುಂದೆ ರಸ್ತೆ ಉಬ್ಬು ಇದೆ ಎಂಬ ಎಚ್ಚರಿಕೆಯ ಫಲಕ ರಸ್ತೆ ಬದಿಯಲ್ಲಿ ಇರಬೇಕು. ಐಆರ್‌ಸಿ ನಿಗದಿಪಡಿಸಿದ ಮಾನದಂಡದ ಪ್ರಕಾರ ಚಿಕ್ಕ ರಸ್ತೆಗಳಲ್ಲಿ ಪರಸ್ಪರ ಛೇದಿಸುವ ಚಿಕ್ಕ ರಸ್ತೆಗಳಲ್ಲಿ ವಿರಳ ಸಂಚಾರದ ರಸ್ತೆಗಳಲ್ಲಿ ಪರಸ್ಪರ ಛೇದಿಸಿ ಮುಖ್ಯರಸ್ತೆಗೆ ವಿಲೀನವಾಗುವ ರಸ್ತೆಗಳಲ್ಲಿ ಜನವಸತಿ ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರದೇಶಗಳಲ್ಲಿ ವೇಗದಿಂದ ಅಪಘಾತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಚಿಕ್ಕ ಹಾಗೂ ಹಳೆಯ ಸೇತುವೆಗೆ ಸಂಪರ್ಕ ಹೊಂದುವ ರಸ್ತೆಗಳಲ್ಲಿ ರೈಲ್ವೆ ಲೆವಲ್ ಕ್ರಾಸಿಂಗ್ ಹತ್ತಿರ ತೀವ್ರ ತಿರುವು ಇರುವ ಮುಂದಿನ ರಸ್ತೆ ಸರಿಯಾಗಿ ಕಾಣಿಸದಿರುವ ರಸ್ತೆಗಳಲ್ಲಿ ಹಾಗೂ ಗಂಟೆಗೆ 25 ಕಿ.ಮೀ. ವೇಗವಾಗಿ ಚಲಿಸಬಹುದಾದ ರಸ್ತೆಗಳಲ್ಲಿ ಮಾತ್ರವೇ ಉಬ್ಬುಗಳನ್ನು ನಿರ್ಮಿಸಬಹುದು. ಆದರೆ ಈ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಾರ್ವಜನಿಕರು ದೂರಿದರು.

ಕನಕಪುರ ರಸ್ತೆಯ ಕೋಣನಕುಂಟೆ ವೃತ್ತದ ಬಳಿ ಬೀದಿ ದೀಪಗಳು ರಾತ್ರಿ ಅವಧಿಯಲ್ಲಿ ಬೆಳಗುತ್ತಿಲ್ಲ –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಕನಕಪುರ ರಸ್ತೆಯ ಕೋಣನಕುಂಟೆ ವೃತ್ತದ ಬಳಿ ಬೀದಿ ದೀಪಗಳು ರಾತ್ರಿ ಅವಧಿಯಲ್ಲಿ ಬೆಳಗುತ್ತಿಲ್ಲ –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಚೈತ್ರಾ
ಚೈತ್ರಾ
ಮಹೇಶ್
ಮಹೇಶ್
ನಾಗರಾಜ್
ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT