ಬೆಂಗಳೂರು: ಸಂಪಿಗೆ ರಸ್ತೆಯಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದ್ದ ಕಟ್ಟಡಗಳ ಜಾಗ ಬಿಬಿಎಂಪಿ ಸ್ವತ್ತು ಎಂದು ಪ್ರಾದೇಶಿಕ ಆಯುಕ್ತರ ನ್ಯಾಯಾಲಯ ಘೋಷಿಸಿದ್ದು, ಕೂಡಲೇ ತೆರವುಗೊಳಿಸಿ ವಶಕ್ಕೆ ಪಡುವಂತೆ ಬಿಬಿಎಂಪಿಗೆ ಆದೇಶಿಸಿದೆ.
ಹನುಮಂತಪುರದ ಜಕ್ಕರಾಯನಕೆರೆ ಮತ್ತು ಜಕ್ಕಸಂದ್ರದಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ 4.28 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಬಿಬಿಎಂಪಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಸುಶೀಲ್ ಮಂತ್ರಿ, ಹಮರ್ ಶೆಲ್ಟರ್ಸ್ ಪ್ರೈವೆಟ್ ಲಿಮಿಟೆಡ್, ಮೈಸೂರು ಸ್ಪಿನ್ನಿಂಗ್ ಮತ್ತು ಮ್ಯಾನುಪ್ಯಾಕ್ಚರಿಂಗ್ ಮಿಲ್ಸ್ ಲಿಮಿಟೆಡ್, ನ್ಯಾಷನಲ್ ಟೆಕ್ಸ್ಟೈಲ್ಸ್ ಲಿಮಿಟೆಡ್ ಸೇರಿ19 ಮಂದಿ ಬಿಬಿಎಂಪಿ ಆಸ್ತಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಬಿಬಿಎಂಪಿ ಆರೋಪಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಆಯುಕ್ತರು,ಈ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯುವಂತೆ ಆದೇಶಿಸಿದ್ದಾರೆ.
‘ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುತ್ತದೆ’ ಎಂದು ಮೇಯರ್ ಗೌತಮ್ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.