ಬೆಂಗಳೂರು: ಪಾಲಿಕೆ ಅಧಿಕಾರಿಗಳು ಬೆಂಗಳೂರನ್ನು ಕಸದ ಮಾಫಿಯಾ ಕೈಗೆ ಕೊಟ್ಟು, ಕೊಂಪೆ ಮಾಡಿದ್ದಾರೆ ಹಾಗೂ ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ರಾಜರಾಜೇಶ್ವರಿ ನಗರದ ಪಾಲಿಕೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ,'ರಾಜರಾಜೇಶ್ವರಿ ನಗರ ನಿವಾಸಿಯೊಬ್ಬರು ತಮ್ಮ ಮನೆಯ ಬಳಿ ಇದ್ದ ಕಸದ ಸಮಸ್ಯೆ ಬಗ್ಗೆ ಬಿಬಿಎಂಪಿ ಸಹಾಯ ಆ್ಯಪ್ ಮೂಲಕ ದೂರು ನೀಡಿದ್ದರು. ಆದರೆ, ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳು ಪೌರ ಕಾರ್ಮಿಕರನ್ನು ಎತ್ತಿಕಟ್ಟಿ, ಕಸದ ಮಾಫಿಯಾ ಪರವಾಗಿ ಕೆಲಸ ಮಾಡಿದ್ದಾರೆ' ಎಂದು ಆರೋಪಿಸಿದರು.
‘ಕಸ ವಿಲೇವಾರಿಗಾಗಿ ಪಾಲಿಕೆ ಪ್ರತಿ ವರ್ಷ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಆದರೂ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಕಡಿವಾಣ ಇಲ್ಲದಂತಾಗಿದೆ. ಕಸ ವಿಲೇವಾರಿ ಮಾಡುವುದು ಪಾಲಿಕೆಯ ಕರ್ತವ್ಯ. ಅದನ್ನು ಸರಿಯಾಗಿ ನಿರ್ವಹಿಸಬೇಕು’ ಎಂದರು.
ಪ್ರತಿಭಟನೆಯಲ್ಲಿ ಎಎಪಿ ಸಹ ಸಂಚಾಲಕ ವಿಜಯ್ ಶರ್ಮ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಉಪಾಧ್ಯಕ್ಷ ಸುರೇಶ್ ರಾಥೋಡ್, ಆಟೊ ಘಟಕದ ಉಪಾಧ್ಯಕ್ಷ ವೆಂಕಟೇಗೌಡ, ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತೀಶ್ ಗೌಡ, ಮುಖಂಡರಾದ ಗುರುಮೂರ್ತಿ, ವಿಜಯ್ ಸುಮನ್ ಪ್ರಶಾಂತ್, ಸಿದ್ದು ಭಾಗವಹಿಸಿದ್ದರು.