ಬೆಂಗಳೂರು: ವಸತಿ ಪ್ರದೇಶಗಳಲ್ಲಿ ಮಂಗಗಳು ಸೃಷ್ಟಿಸುವ ಸಮಸ್ಯೆ ನಿಭಾಯಿಸುವ ಸಂಬಂಧ ಯೋಜನೆ ರೂಪಿಸಲು ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಹಿರಿಯ ಅಧಿಕಾರಿಗಳ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಕೀಲ ಬಿ.ಎಸ್. ರಾಧಾನಂದನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಮಂಗಗಳ ಉಪಟಳದಿಂದ ಜನರನ್ನು ಕಾಪಾಡುವುದು ಮತ್ತು ಮಂಗಳ ಜೀವ ರಕ್ಷಿಸುವುದು ಎರಡೂ ಸರ್ಕಾರದ ಜವಾಬ್ದಾರಿ’ ಎಂದು ಹೇಳಿತು.
‘ಕೋತಿಗಳ ಉಪಟಳದ ಬಗ್ಗೆ ದೂರು ಸ್ವೀಕರಿಸಲು ವ್ಯವಸ್ಥೆಯೊಂದನ್ನು ರೂಪಿಸಲು ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದರು.
‘ದೆಹಲಿ ಹೈಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಸಮಸ್ಯೆ ನಿಭಾಯಿಸುವ ಯೋಜನೆ ರೂಪಿಸಬಹುದಾಗಿದೆ. ಮಂಗಗಳನ್ನು ಸುರಕ್ಷಿತವಾಗಿ ಹಿಡಿದು ನೈಸರ್ಗಿಕ ಆವಾಸಸ್ಥಾನಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಈ ಸಂಬಂಧ ಜು.12ರೊಳಗೆ ಅನುಸರಣೆ ವರದಿ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.